ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿವ ಕಾಂಗ್ರೆಸ್ನದ್ದು 'ಬೂಟಾಟಿಕೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬುಧವಾರ ಆರೋಪಿಸಿದ್ದಾರೆ.
ನೀವೆಷ್ಟೇ ಬೊಬ್ಬೆ ಹೊಡೆದರೂ, ಅಪಪ್ರಚಾರದ ವ್ಯರ್ಥ ಪ್ರಯತ್ನ ನಡೆಸಿದರೂ ಮೋದಿ ಅವರ ಮೇಲಿನ ಜನರ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 'ಅಯೋಧ್ಯೆಯ ರಾಮಮಂದಿರ ದೇಣಿಗೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಒತ್ತಾಯಿಸುವ ಕೆಪಿಸಿಸಿಯ ನಿರ್ಣಯ ಅವಿವೇಕತನದ ಪರಮಾವಧಿ ಮತ್ತು ಹಾಸ್ಯಾಸ್ಪದ ನಿರ್ಣಯವಾಗಿದೆ' ಎಂದಿದ್ದಾರೆ.
'ಸ್ವಾತಂತ್ರ್ಯ ಯೋಧರ ತ್ಯಾಗ, ಪರಿಶ್ರಮದಿಂದ ಕಟ್ಟಿದ ನ್ಯಾಶನಲ್ ಹೆರಾಲ್ಡ್ ಸಂಸ್ಥೆಯ ಐದು ಸಾವಿರ ಕೋಟಿ ರೂಪಾಯಿ ಆಸ್ತಿ ಪಾಸ್ತಿಗಳನ್ನು ನುಂಗಿ ನೀರು ಕುಡಿದು ಬಂಧನದ ಭೀತಿಯಿಂದ ಜಾಮೀನಿನ ಮೇಲಿರುವ ನಿಮ್ಮ ಅಧಿನಾಯಕಿ ಸೋನಿಯಾ ಗಾಂಧಿ ರಾಜ್ಯಸಭಾ ಸದಸ್ಯತ್ವಕ್ಕೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತಿರುವ ನಿಮ್ಮ ನಾಯಕ ರಾಹುಲ್ ಗಾಂಧಿ ಮೊದಲು ರಾಜೀನಾಮೆ ನೀಡಲಿ' ಎಂದರು.
'ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ʼ ಸ್ವತಂತ್ರ ನಿರ್ವಹಣಾ ಸಂಸ್ಥೆ. ಆದರೆ, ಇದರ ದೇಣಿಗೆಗೆ ಕೈಹಾಕಿರುವ ಪ್ರಕರಣ ಹೊರ ಬಂದ ಮರುಕ್ಷಣದಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, ತಪ್ಪಿತಸ್ಥರನ್ನು ಬಂಧಿಸುವ ಪಾರದರ್ಶಕ ನಡೆ ಪ್ರದರ್ಶಿಸಿದೆ. ಸದ್ಯ ತನಿಖೆ ಮುಂದುವರೆದಿದೆ. ಇದನ್ನು ಮುಚ್ಚಿ ಹಾಕುವ ಉದ್ದೇಶವಿದ್ದಿದ್ದರೆ, ದೇಣಿಗೆ ಹಗರಣ ಬಯಲಿಗೆ ಬಂದ ತಕ್ಷಣವೇ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಕೈಗೆತ್ತಿಕೊಳ್ಳುತ್ತಿರಲಿಲ್ಲ' ಎಂದಿದ್ದಾರೆ.
'ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಗರಣಗಳನ್ನು ಮುಚ್ಚಿಹಾಕಲು ಮುಂದಾಗಿದೆ. ಇದನ್ನು ನಿಮ್ಮ ಹೈಕಮಾಂಡ್ ಸಮರ್ಥಿಸಿಕೊಂಡಿದೆ. ಅಯೋಧ್ಯೆ ಪ್ರಕಣದಲ್ಲಿ ಸಿಬಿಐ ಮೇಲೆ ಕಾಂಗ್ರೆಸ್ ನಂಬಿಕೆ ವ್ಯಕ್ತಪಡಿಸಿರುವುದು ಆಶ್ಚರ್ಯ ತರಿಸಿದೆ. ಕರ್ನಾಟಕದಲ್ಲಿ ಮುಡಾ, ವಾಲ್ಮೀಕಿ ನಿಗಮದ ಹಗರಣಗಳ ವಿರುದ್ಧ ತನಿಕೆಗೆ ಮುಂದಾದಾಗ ಸಿಬಿಐ, ಇಡಿ ಪಕ್ಷಪಾತಿಗಳೆಂದು ಹೇಳಿದಿರಿ. ಸಿಬಿಐ ಬಗ್ಗೆ ನಂಬಿಕೆ ಇದ್ದರೆ ಮುಡಾ ಹಗರಣದಲ್ಲಿ ಸಿಬಿಐ ತನಿಕೆ ಬೇಡವೆಂದು ನ್ಯಾಯಾಲಯದಲ್ಲಿ ಏಕೆ ಹೋರಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಮಂಗಳವಾರ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಐದು ನಿರ್ಣಯಗಳನ್ನು ಅಂಗೀಕರಿಸಿತು. ಅದರಲ್ಲಿ ಒಂದು ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನದ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸುವುದು.
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಕರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಅದು ಒತ್ತಾಯಿಸಿತು.
ರಾಮ ಮಂದಿರದ ದೇಣಿಗೆ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಎಸ್ಐಟಿ (SIT) ಎಂಟು ಮಂದಿ ಆರೋಪಿಗಳನ್ನು ಬಂಧಿಸಿದೆ.