ಬೆಂಗಳೂರು: ಕರ್ನಾಟಕದಲ್ಲಿ ದೇಶದ ಮೊಟ್ಟಮೊದಲ ಸರ್ಕಾರದ ನೇತೃತ್ವದ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಹಾಗೂ ಎಐ ಹಬ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಮಂಗಳವಾರ ಘೋಷಿಸಿದ್ದಾರೆ. ಎಐ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಪ್ರತಿಭಾ ಅಭಿವೃದ್ಧಿಯನ್ನು ಬಲಪಡಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ನಡೆದ ಗೂಗಲ್ ಐ/ಒ ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತಾವಿತ ಎಐ ವಿಶ್ವವಿದ್ಯಾಲಯವು ಜಾಗತಿಕ ಮಟ್ಟದ ಎಐ ಪರಿಣಿತರನ್ನು ರೂಪಿಸುವುದರ ಜೊತೆಗೆ, ಉನ್ನತ ಮಟ್ಟದ ಸಂಶೋಧನೆಗೆ ಉತ್ತೇಜನ ನೀಡಲಿದೆ. ಅಲ್ಲದೆ, ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸರ್ಕಾರದ ನಡುವಿನ ಸಹಯೋಗವನ್ನು ಬಲಪಡಿಸಲಿದೆ ಎಂದರು.
ಎಐ ಹಬ್ ಸ್ಟಾರ್ಟ್ಅಪ್ಗಳು, ಕಂಪನಿಗಳು ಹಾಗೂ ಇತರ ಪಾಲುದಾರರು ಎಐ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸಲು ಇಂಕ್ಯುಬೇಷನ್ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆಯನ್ನು(AI) ಇಂದಿನ ತಲೆಮಾರಿನ ಅತ್ಯಂತ ಮಹತ್ವದ ತಾಂತ್ರಿಕ ಕ್ರಾಂತಿ ಎಂದು ಬಣ್ಣಿಸಿದ ಮುಖ್ಯಮಂತ್ರಿಗಳು, ಕರ್ನಾಟಕವನ್ನು "ಎಐ-ನೇಟಿವ್ ರಾಜ್ಯ"ವನ್ನಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು. ಆಡಳಿತದಲ್ಲಿ ಎಐಯನ್ನು ಅಳವಡಿಸುವ ಮೂಲಕ ಸಾರ್ವಜನಿಕ ಸೇವೆಗಳ ವಿತರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲಾಗುವುದು ಎಂದು ತಿಳಿಸಿದರು.
ಎಐ ಶಿಕ್ಷಕರಿಗೆ ಉತ್ತಮ ಬೋಧನೆಗೆ ನೆರವಾಗಬೇಕು, ವೈದ್ಯರು ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಹಾಯವಾಗಬೇಕು, ರೈತರಿಗೆ ಉತ್ತಮ ಕೃಷಿ ಸಲಹೆಗಳು ದೊರೆಯಬೇಕು, ನಾಗರಿಕರು ಸರ್ಕಾರಿ ಸೇವೆಗಳನ್ನು ಗೌರವಯುತವಾಗಿ ಮತ್ತು ವೇಗವಾಗಿ ಪಡೆಯಬೇಕು ಹಾಗೂ ಸಣ್ಣ ಉದ್ಯಮಗಳು ಸ್ಪರ್ಧಾತ್ಮಕವಾಗಿ ಬೆಳೆಯಲು ನೆರವಾಗಬೇಕು ಎಂದು ಹೇಳಿದರು.
ಕರ್ನಾಟಕವು ಭಾರತದ ಸಾಫ್ಟ್ವೇರ್ ರಫ್ತಿನಲ್ಲಿ ಸುಮಾರು 40 ಶೇಕಡಾ ಕೊಡುಗೆ ನೀಡುತ್ತಿದ್ದು, ಬೆಂಗಳೂರಿನಲ್ಲಿ 17 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಹಾಗೂ ಸಾವಿರಾರು ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ಗಳು (GCCs) ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಎಐ ನಾವೀನ್ಯತೆ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಉನ್ನತ ಗಣಕ ತಂತ್ರಜ್ಞಾನಕ್ಕೆ ಅಗತ್ಯವಾದ ಡೇಟಾ ಸೆಂಟರ್ಗಳು ಸೇರಿದಂತೆ ಡಿಜಿಟಲ್ ಮೂಲಸೌಕರ್ಯವನ್ನು ಸರ್ಕಾರ ಇನ್ನಷ್ಟು ಬಲಪಡಿಸಲಿದೆ ಎಂದು ಅವರು ತಿಳಿಸಿದರು.
ಗೂಗಲ್ ಸಂಸ್ಥೆ ಕರ್ನಾಟಕದೊಂದಿಗೆ ತನ್ನ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಬೇಕೆಂದು ಆಹ್ವಾನಿಸಿದ ಮುಖ್ಯಮಂತ್ರಿ, ಶಿಕ್ಷಣ, ಆರೋಗ್ಯ, ಕೃಷಿ, ಹವಾಮಾನ ಬದಲಾವಣೆಗೆ ಪ್ರತಿರೋಧ, ನಗರ ಸಂಚಾರ ಮತ್ತು ಆಡಳಿತ ಕ್ಷೇತ್ರಗಳಿಗೆ ಎಐ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.
ಇದರ ಜೊತೆಗೆ, ಸ್ಟಾರ್ಟ್ಅಪ್ಗಳಿಗೆ ಬೆಂಬಲ ನೀಡುವುದು, ವಿದ್ಯಾರ್ಥಿಗಳಿಗೆ ಎಐ ಕಲಿಕೆಯ ಅವಕಾಶಗಳನ್ನು ವಿಸ್ತರಿಸುವುದು ಹಾಗೂ ಕರ್ನಾಟಕವನ್ನು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಕ್ಷೇತ್ರದ ಜಾಗತಿಕ ಕೇಂದ್ರವನ್ನಾಗಿ ರೂಪಿಸಲು ಸಹಕರಿಸುವಂತೆ ಗೂಗಲ್ಗೆ ಕರೆ ನೀಡಿದರು.
ಡೆವಲಪರ್ಗಳು, ಉದ್ಯಮಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ನಾವೀನ್ಯತೆಯ ಮುಂದಿನ ಅಲೆಯನ್ನು ಮುನ್ನಡೆಸುವಂತೆ ಕರೆ ನೀಡಿದ ಅವರು, ಎಐ ತಂತ್ರಜ್ಞಾನವು ಜವಾಬ್ದಾರಿಯುತ, ಎಲ್ಲರನ್ನೂ ಒಳಗೊಂಡ ಹಾಗೂ ವಿಶ್ವಾಸಾರ್ಹವಾಗಿರಬೇಕು ಎಂದು ಒತ್ತಾಯಿಸಿದರು.