ಬೆಂಗಳೂರು: ಅಪಾರ್ಟ್ಮೆಂಟ್ ಮಾಲೀಕರು ತಮ್ಮ ಮಾಲೀಕತ್ವ, ಆಡಳಿತ ಮತ್ತು ನಿರ್ವಹಣೆಗೆ ಸಂಬಂಧಿಸಿದ ಉತ್ತಮವಾಗಿ ಪರಿಹರಿಸುವ ಹೊಸ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಸರ್ಕಾರವು ಕರಡು ವಿಧೇಯಕವನ್ನು ಸಿದ್ಧಪಡಿಸಿದೆ. ಇದನ್ನು ಮುಂದುವರಿಸುವ ಮುನ್ನ, ಎಲ್ಲಾ ಪಾಲುದಾರರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರ ಮುಂದಾಗಿದೆ. ಹೀಗಾಗಿ ನಾಳೆ ಜುಲೈ 15ರ ಬುಧವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ಸಭಾಂಗಣದಲ್ಲಿ ಪಾಲುದಾರರ ಸಮಾಲೋಚನಾ ಸಭೆಯನ್ನು ನಿಗದಿಪಡಿಸಲಾಗಿದೆ. ಈ ಸಮಾಲೋಚನೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಾ ಉಪಸ್ಥಿತರಿರಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ ನಿರ್ವಹಣೆ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹೊಸ, ಸುಧಾರಿತ ಕಾನೂನನ್ನು ಜಾರಿಗೆ ತರುವಂತೆ ಬೆಂಗಳೂರಿನ ಅಪಾರ್ಟ್ಮೆಂಟ್ ಮಾಲೀಕರು ಹಲವು ವರ್ಷಗಳಿಂದ ಈ ಕುರಿತು ಒತ್ತಾಯಿಸುತ್ತಿದ್ದರು. ಅವರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರವು ಹೊಸ ಕಾನೂನನ್ನು ರೂಪಿಸುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಏನಿದು ಹೊಸ ಅಪಾರ್ಟ್ಮೆಂಟ್ ಕಾಯ್ದೆ
ಅಪಾರ್ಟ್ಮೆಂಟ್ ಮಾಲೀಕರ ಮಸೂದೆಯು ಪ್ರತ್ಯೇಕ ಅಪಾರ್ಟ್ಮೆಂಟ್ಗಳ ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆಗೆ ಕಾನೂನು ಚೌಕಟ್ಟನ್ನು ನಿರ್ಮಿಸುವ ಕಾನೂನು ಆಗಿದೆ. ಅಪಾರ್ಟ್ಮೆಂಟ್ಗಳನ್ನು ಮಾರಾಟ ಮಾಡುವ ಮತ್ತು ಉತ್ತರಾಧಿಕಾರ ಹೊಂದುವುದಕ್ಕೆ ಇದು ಅನುಮತಿ ನೀಡುತ್ತದೆ. ಅಪಾರ್ಮೆಂಟ್ ನಲ್ಲಿ ಬಳಸುವ ಲಿಫ್ಟ್ಗಳು, ಈಜುಕೊಳಗಳು ಹಾಗೂ ಗಾರ್ಡನ್ ಪ್ರದೇಶಗಳ ಹಂಚಿಕೆ, ನಿರ್ವಹಣೆ ಮತ್ತು ಪಾಲನೆಯನ್ನು ಈ ಕಾಯ್ದೆ ನಿಯಂತ್ರಿಸುತ್ತದೆ.
ಹೊಸ ಕಾನೂನನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ಮಾಲೀಕರು ಈ ಹಿಂದೆ ಕೆಲವೊಂದು ಬೇಡಿಕೆಗಳನ್ನು ಇಟ್ಟಿದರು. ಅಪಾರ್ಟ್ಮೆಂಟ್ ನಿವಾಸಿಗಳ ಕಲ್ಯಾಣ ಸಂಘಟನೆಗಳ ರಚನೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಇರಬಾರದು ಎಂಬ ಬೇಡಿಕೆಯನ್ನು ಇಟ್ಟಿದ್ದರು. ಅಷ್ಟೇ ಅಲ್ಲದೆ, ಬಿಲ್ಡರ್ಗಳು ನಿಗದಿತ ಅವಧಿಯೊಳಗಾಗಿ ಭೂಮಿ ಮತ್ತು ಸಾಮಾನ್ಯ ಪ್ರದೇಶಗಳನ್ನು ಮಾಲೀಕರ ಸಂಘಗಳಿಗೆ ಹಸ್ತಾಂತರಿಸಬೇಕು ಎಂಬ ಬೇಡಿಕೆಯನ್ನು ಇಡಲಾಗಿತ್ತು.
ಜೊತೆಗೆ ಕಾನೂನು ಸಂಘರ್ಷಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಸಮರ್ಥ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಸಾಕು ಪ್ರಾಣಿಗಳು, ಸಾಮಾನ್ಯ ಪ್ರದೇಶಗಳ ಬಳಕೆ ಮುಂತಾದ ನಿಯಮಗಳನ್ನು ರೂಪಿಸುವ ಕುರಿತಾಗಿ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಇಡಲಾಗಿತ್ತು.