ಬೆಂಗಳೂರು: ನಮ್ಮ ಎಚ್ಚರ.. ನಮ್ಮ ಹೋರಾಟ, ನಮ್ಮ ಧ್ವನಿ…. ಇಂದು ಸತ್ಯ ಗೆದ್ದಿದೆ! ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಮತ್ತೆ ಹಾರಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಡಿಜಿಸಿಎ ಜಕ್ಕೂರು ಫ್ಲೈಯಿಂಗ್ ಸ್ಕೂಲ್ಗೆ 2026ರಿಂದ 2031ರವರೆಗೆ ಐದು ವರ್ಷಗಳ ಪರವಾನಗಿಯನ್ನು ನವೀಕರಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಮೈಸೂರು ರಾಜಮನೆತನ ನಾಡಿಗೆ ದಾನವಾಗಿ ನೀಡಿದ ಅಮೂಲ್ಯ ಭೂಮಿಯಲ್ಲಿ ನಿರ್ಮಾಣಗೊಂಡಿರುವ ದೇಶದ ಅತ್ಯಂತ ಹಳೆಯ ಹಾರಾಟ ತರಬೇತಿ ಸಂಸ್ಥೆಗಳಲ್ಲಿ ಒಂದಾದ ಜಕ್ಕೂರು ಸರ್ಕಾರಿ ಫ್ಲೈಯಿಂಗ್ ಟ್ರೈನಿಂಗ್ ಸ್ಕೂಲ್ (GFTS) ಅನ್ನು ರಿಯಲ್ ಎಸ್ಟೇಟ್ ಲಾಬಿಯ ಕಪಿಮುಷ್ಟಿಯಿಂದ ರಕ್ಷಿಸಲು ಬಿಜೆಪಿ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ.
ಕಾಂಗ್ರೆಸ್ ಸರ್ಕಾರ ‘ಸ್ಪೋರ್ಟ್ಸ್ ಕಾಂಪ್ಲೆಕ್ಸ್’ ಎಂಬ ನೆಪದಲ್ಲಿ ಈ ಸಂಸ್ಥೆಯನ್ನು ಸ್ಥಳಾಂತರಿಸಿ, ನೂರಾರು ಎಕರೆ ಅಮೂಲ್ಯ ಸಾರ್ವಜನಿಕ ಭೂಮಿಯನ್ನು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಒಪ್ಪಿಸಲು ಸಂಚು ರೂಪಿಸಿತ್ತು. ವಿಮಾನ ಹಾರಾಟವೇ ನಿಂತರೆ ಎತ್ತರದ ಕಟ್ಟಡಗಳಿಗೆ ಇದ್ದ ನಿರ್ಬಂಧಗಳು ಸಡಿಲವಾಗಿ, ಸಾರ್ವಜನಿಕ ಆಸ್ತಿ ಖಾಸಗಿ ಲಾಭದ ಸಾಧನವಾಗುತ್ತಿತ್ತು.
ಈ ಷಡ್ಯಂತ್ರವನ್ನು ಮೊದಲ ಬಾರಿಗೆ ವಿಧಾನಸಭೆಯೊಳಗೆ ದಾಖಲೆ ಸಮೇತ ಬಯಲು ಮಾಡಿದ್ದು ಬಿಜೆಪಿ. ಆಗ ನಮ್ಮ ಆರೋಪಗಳನ್ನು ತಳ್ಳಿಹಾಕಿದ ಕಾಂಗ್ರೆಸ್ ಸರ್ಕಾರಕ್ಕೆ ಇಂದು ಸತ್ಯವೇ ಉತ್ತರ ನೀಡಿದೆ. ಡಿಜಿಸಿಎ (DGCA) ಜಕ್ಕೂರು ಫ್ಲೈಯಿಂಗ್ ಸ್ಕೂಲ್ಗೆ 2026ರಿಂದ 2031ರವರೆಗೆ ಐದು ವರ್ಷಗಳ ಪರವಾನಗಿಯನ್ನು ನವೀಕರಿಸಿದೆ. ಸುಮಾರು ಮೂರು ವರ್ಷಗಳ ಬಳಿಕ ಮತ್ತೆ ಹಾರಾಟ ತರಬೇತಿ ಆರಂಭವಾಗಲಿದೆ. ಕಾಂಗ್ರೆಸ್ ಸರ್ಕಾರದ ಭೂಗಳ್ಳತನದ ಹುನ್ನಾರಕ್ಕೆ ಹೀನಾಯ ಸೋಲಾಗಿದೆ. ಕಾಂಗ್ರೆಸ್ ಭೂಗಳ್ಳರಿಗೆ ಮುಖಭಂಗವಾಗಿದೆ.
ಇದು ಕೇವಲ ಪರವಾನಗಿ ನವೀಕರಣವಲ್ಲ; ಸಾರ್ವಜನಿಕ ಹಿತಾಸಕ್ತಿಯು ರಿಯಲ್ ಎಸ್ಟೇಟ್ ದುರಾಸೆಯ ಮೇಲೆ ಸಾಧಿಸಿದ ಐತಿಹಾಸಿಕ ವಿಜಯ. ಕೆಎಸ್ಐಸಿ ಆಗಲಿ, ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಆಗಲಿ ಕರ್ನಾಟಕದ ಸಾರ್ವಜನಿಕ ಆಸ್ತಿಯನ್ನು ಯಾರ ಖಾಸಗಿ ರಿಯಲ್ ಎಸ್ಟೇಟ್ ಬ್ಯಾಂಕ್ ಆಗಲೂ ನಾವು ಬಿಡುವುದಿಲ್ಲ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಸ್ಪಷ್ಟ ಎಚ್ಚರಿಕೆ. ಕರ್ನಾಟಕದ ಪ್ರತಿಯೊಂದು ಇಂಚು ಸಾರ್ವಜನಿಕ ಭೂಮಿಯನ್ನು ನಾವು ಕಾಪಾಡುತ್ತೇವೆ. ನಿಮ್ಮ ರಿಯಲ್ ಎಸ್ಟೇಟ್ ರಾಜಕೀಯದ ವಿರುದ್ಧ ಬಿಜೆಪಿ ಸದಾ ಜನರ ಕಾವಲುಗಾರನಾಗಿ ನಿಲ್ಲಲಿದೆ.
ಇದು ಕೇವಲ ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಗೆಲುವಲ್ಲ. ಇದು ಜನಶಕ್ತಿಯ ಗೆಲುವು. ಇದು ಸಾರ್ವಜನಿಕ ಆಸ್ತಿಯ ಗೆಲುವು. ಇದು ಕನ್ನಡಿಗರ ಗೆಲುವು, ಬೆಂಗಳೂರಿನ ಗೆಲುವು. ಜನರ ಧ್ವನಿ ಗೆದ್ದಿದೆ. ಸತ್ಯ ಗೆದ್ದಿದೆ. ಜಕ್ಕೂರು ಗೆದ್ದಿದೆ. ಬೆಂಗಳೂರು ಗೆದ್ದಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.