ಎಫ್‌ಕೆಸಿಸಿಐ ಗ್ಲೋಬಲ್ ಸಿಎಸ್‌ಆರ್‌ ಮತ್ತು ಸಸ್ಟೇನಬಿಲಿಟಿ ಸಮ್ಮಿಟ್‌–2026ರಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೈಪಿಡಿ ಬಿಡುಗಡೆ ಮಾಡಿದರು.  
ರಾಜ್ಯ

CSR ಯೋಜನೆಗಳ ಮೇಲ್ವಿಚಾರಣೆಗೆ ವಿಶೇಷ ತಂಡ ರಚನೆ: ಸಿಎಂ ಡಿ ಕೆ ಶಿವಕುಮಾರ್ ಘೋಷಣೆ

ಮಾಹಿತಿ ತಂತ್ರಜ್ಞಾನ (IT) ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳ ಉದಯಕ್ಕೂ ಮುನ್ನವೇ ಎಫ್‌ಕೆಸಿಸಿಐ ಕರ್ನಾಟಕದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ರಾಜ್ಯದ ಯಶಸ್ಸಿಗೆ ಕೈಗಾರಿಕಾ ಕ್ಷೇತ್ರದ ಕೊಡುಗೆಯೇ ಭದ್ರ ಬುನಾದಿಯಾಗಿದೆ ಎಂದರು.

ಬೆಂಗಳೂರು: ಕೈಗಾರಿಕೆಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಪ್ರಾಥಮಿಕ ಶಿಕ್ಷಣ ಬಲಪಡಿಸುವತ್ತ ಕೇಂದ್ರೀಕರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ರಾಜ್ಯಾದ್ಯಂತ ನಡೆಯುತ್ತಿರುವ ಸಿಎಸ್‌ಆರ್‌ ಯೋಜನೆಗಳ ಮೇಲ್ವಿಚಾರಣೆಗಾಗಿ ಸರ್ಕಾರ ವಿಶೇಷ ತಂಡವನ್ನು ರಚಿಸುವುದಾಗಿ ಅವರು ಘೋಷಿಸಿದರು.

ನಗರದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (FKCCI) ಆಯೋಜಿಸಿದ್ದ ಗ್ಲೋಬಲ್ ಸಿಎಸ್‌ಆರ್‌ ಮತ್ತು ಸಸ್ಟೇನಬಿಲಿಟಿ ಸಮ್ಮಿಟ್–2026 ನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಅಭಿವೃದ್ಧಿಗೆ ಎಫ್‌ಕೆಸಿಸಿಐ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದರು.

ಎಫ್‌ಕೆಸಿಸಿಐಯನ್ನು ಅಭಿನಂದಿಸಿದ ಮುಖ್ಯಮಂತ್ರಿ, ಒಟ್ಟಿಗೆ ಸೇರುವುದು ಆರಂಭ, ಒಟ್ಟಿಗೆ ಚರ್ಚಿಸುವುದು ಪ್ರಗತಿ, ಒಟ್ಟಿಗೆ ಕೆಲಸ ಮಾಡುವುದು ಯಶಸ್ಸು ಎಂದು ಹೇಳಿದರು.

ಮಾಹಿತಿ ತಂತ್ರಜ್ಞಾನ (IT) ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳ ಉದಯಕ್ಕೂ ಮುನ್ನವೇ ಎಫ್‌ಕೆಸಿಸಿಐ ಕರ್ನಾಟಕದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ರಾಜ್ಯದ ಯಶಸ್ಸಿಗೆ ಕೈಗಾರಿಕಾ ಕ್ಷೇತ್ರದ ಕೊಡುಗೆಯೇ ಭದ್ರ ಬುನಾದಿಯಾಗಿದೆ ಎಂದರು.

ಸಿಎಸ್‌ಆರ್‌ ಪರಿಕಲ್ಪನೆಯನ್ನು ಜಾರಿಗೆ ತಂದ ಶ್ರೇಯಸ್ಸು ಮಾಜಿ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದ ಅವರು, ಸಿಎಸ್‌ಆರ್‌ ದಾನವಲ್ಲ, ಸುಸ್ಥಿರ ಅಭಿವೃದ್ಧಿಗೆ ಮಾಡುವ ಹೂಡಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ನಗರೀಕರಣದ ಕುರಿತು ಮಾತನಾಡಿದ ಮುಖ್ಯಮಂತ್ರಿ, ತಾವು ಶಿಕ್ಷಣಕ್ಕಾಗಿ ಹಳ್ಳಿಯಿಂದ ನಗರಕ್ಕೆ ಬಂದು ಮತ್ತೆ ಊರಿಗೆ ಮರಳಲಿಲ್ಲ. ಇದು ಅನೇಕರ ಜೀವನದ ಕಥೆಯಾಗಿದೆ ಎಂದರು.

ಕರ್ನಾಟಕದ ನಗರ ಜನಸಂಖ್ಯೆ ಈಗ ಶೇ.43ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ ಅವರು, ಎಸ್‌.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದ ಅವಧಿಯಲ್ಲಿ ಬೆಂಗಳೂರಿನ ಜನಸಂಖ್ಯೆ ಸುಮಾರು 70 ಲಕ್ಷವಿತ್ತು. ಇಂದು ಅದು ಸುಮಾರು 1.4 ಕೋಟಿಗೆ ತಲುಪಿದ್ದು, ನಗರದಲ್ಲಿ ಸುಮಾರು 1.30 ಲಕ್ಷ ವಾಹನಗಳು ಸಂಚರಿಸುತ್ತಿವೆ ಎಂದು ಹೇಳಿದರು.

ಬೆಂಗಳೂರು ಇಂದು ಜಾಗತಿಕ ನಾಯಕರ ಗಮನ ಸೆಳೆಯುತ್ತಿರುವುದಕ್ಕೆ ದೂರದೃಷ್ಟಿಯ ನಾಯಕರ ಭದ್ರ ಅಡಿಪಾಯ ಮತ್ತು ಉತ್ತಮ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂದು ಅವರು ಹೇಳಿದರು. ದೇಶದ 140 ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಸುಮಾರು 38 ಶಾಲೆಗಳು ಕರ್ನಾಟಕದಲ್ಲಿವೆ ಎಂದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣದ ಆರಂಭದ ದಿನಗಳನ್ನು ನೆನಪಿಸಿಕೊಂಡ ಡಿ ಕೆ ಶಿವಕುಮಾರ್, ಆ ಯೋಜನೆಯ ಅಧ್ಯಕ್ಷರಾಗಿ ಎನ್‌.ಆರ್‌. ನಾರಾಯಣಮೂರ್ತಿ ಅವರನ್ನು ನೇಮಿಸಲಾಗಿತ್ತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಬೆಂಗಳೂರು ಜಾಗತಿಕ ನಾಯಕರ ನೆಚ್ಚಿನ ತಾಣವಾಗಲಿದೆ ಎಂದು ಹೇಳಿದ್ದನ್ನು ಸ್ಮರಿಸಿದರು.

ಹಿಂದೆ ವಿಶ್ವ ನಾಯಕರು ಮೊದಲು ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ಅಥವಾ ಕೊಲ್ಕತ್ತಾಗೆ ಭೇಟಿ ನೀಡುತ್ತಿದ್ದರು. ಈಗ ಅವರು ಮೊದಲು ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಹೇಳಿದರು.

ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್ ಹಾಗೂ ಉತ್ಪಾದನಾ ವಲಯದ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ಕರ್ನಾಟಕದ ಕೈಗಾರಿಕಾ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಎಫ್‌ಕೆಸಿಸಿಐ ಮತ್ತಷ್ಟು ಬಲಪಡಿಸಿದೆ ಎಂದರು.

ಕಾರ್ಮಿಕರು ಮತ್ತು ಉದ್ಯೋಗದಾತರ ನಡುವೆ ಸಮತೋಲನ ಇರಬೇಕು ಎಂದು ಒತ್ತಿಹೇಳಿದ ಅವರು, ಉದ್ಯೋಗದಾತರಿಲ್ಲದಿದ್ದರೆ ಉದ್ಯೋಗಿಗಳೂ ಇರುವುದಿಲ್ಲ. ಕಾರ್ಮಿಕರಿಗೆ ಅಗತ್ಯ ಬೆಂಬಲ ನೀಡುತ್ತಾ ಸಮತೋಲನ ಕಾಪಾಡಬೇಕು ಎಂದು ಹೇಳಿದರು.

ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿರುವ 13 ಲಕ್ಷ ಎಂಜಿನಿಯರ್‌ಗಳಲ್ಲಿ ಸುಮಾರು 6 ಲಕ್ಷ ಮಂದಿ ಕರ್ನಾಟಕದವರೇ ಎಂದು ತಿಳಿಸಿದ ಅವರು, ಇದು ರಾಜ್ಯದ ಪ್ರತಿಭಾ ಸಾಮರ್ಥ್ಯವನ್ನು ತೋರಿಸುತ್ತದೆ ಎಂದರು.

ರಾಜ್ಯದಲ್ಲಿ 71 ವೈದ್ಯಕೀಯ ಕಾಲೇಜುಗಳಿದ್ದು, ಪ್ರತಿ ವರ್ಷ ಸುಮಾರು 13,900 ವೈದ್ಯರು ಹಾಗೂ ಸುಮಾರು 1 ಲಕ್ಷ ಇತರ ವೈದ್ಯಕೀಯ ವೃತ್ತಿಪರರು ಹೊರಬರುತ್ತಿದ್ದಾರೆ. ಆದರೆ ಈ ಪ್ರತಿಭೆಯ ಬಹುಪಾಲು ವಿದೇಶಗಳಿಗೆ ತೆರಳುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಭಾಗಗಳ ಅಭಿವೃದ್ಧಿಗೂ ಸಮಾನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಪ್ರಸ್ತುತ ಸುಮಾರು 10 ಸಾವಿರ ಸಿಎಸ್‌ಆರ್‌ ಯೋಜನೆಗಳು ನಡೆಯುತ್ತಿವೆ. ಅವುಗಳ ಮೇಲ್ವಿಚಾರಣೆಗಾಗಿ ಮೈಸೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ವಿಶೇಷ ಸರ್ಕಾರಿ ತಂಡವನ್ನು ರಚಿಸಲಾಗುವುದು ಎಂದು ಘೋಷಿಸಿದರು.

ಗ್ರಾಮೀಣ ಶಿಕ್ಷಣದತ್ತ ಹೆಚ್ಚು ಗಮನ ಹರಿಸುವಂತೆ ಕೈಗಾರಿಕೆಗಳಿಗೆ ಮನವಿ ಮಾಡಿದ ಅವರು, ಉತ್ತಮ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೆಂಗಳೂರಿಗೆ ವಲಸೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದರು.

ನಿಮ್ಮ ಮೊದಲ ಆದ್ಯತೆ ಪ್ರಾಥಮಿಕ ಶಿಕ್ಷಣವಾಗಿರಬೇಕು. ಶಾಲೆಗಳನ್ನು ದತ್ತು ಪಡೆದು ಮೂಲಸೌಕರ್ಯ ನಿರ್ಮಿಸಿ. ಟೊಯೋಟಾ ಸೇರಿದಂತೆ ಕೆಲವು ಕಂಪನಿಗಳು ಈಗಾಗಲೇ ಶಾಲೆಗಳನ್ನು ನಿರ್ಮಿಸುತ್ತಿವೆ. ಇನ್ನೂ ಹೆಚ್ಚಿನ ಕೈಗಾರಿಕೆಗಳು ಈ ಮಾದರಿಯನ್ನು ಅನುಸರಿಸಬೇಕು ಎಂದು ಕರೆ ನೀಡಿದರು.

ಕೇವಲ ಮೂಲಸೌಕರ್ಯ ನಿರ್ಮಾಣಕ್ಕೆ ಹಣ ನೀಡುವುದಷ್ಟೇ ಅಲ್ಲದೆ, ಶಿಕ್ಷಣ ಕ್ಷೇತ್ರಕ್ಕೆ ಪರಿಣತ ಸಿಬ್ಬಂದಿಯನ್ನೂ ಒದಗಿಸಬೇಕು ಎಂದು ಅವರು ಸಲಹೆ ನೀಡಿದರು.

ಪ್ರತಿಯೊಬ್ಬ ಮಗು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದಿರಬೇಕು. ಅದಕ್ಕಾಗಿಯೇ ನಾವು ವಿವಿಧ ನೀತಿಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಬಲಿಷ್ಠ ಕೈಗಾರಿಕಾ ವಲಯವೇ ಬಲಿಷ್ಠ ಕರ್ನಾಟಕ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿ, ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳು ಸಮಾಜವನ್ನು ವೇಗವಾಗಿ ಬದಲಾಯಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ತಕ್ಷಣದ ಆದ್ಯತೆ ಪ್ರಾಥಮಿಕ ಶಿಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿ ಆಗಿರಬೇಕು ಎಂದರು.

ಪ್ರತಿಭಾವಂತ ಮಾನವ ಸಂಪನ್ಮೂಲ, ಆಹ್ಲಾದಕರ ಹವಾಮಾನ ಹಾಗೂ ಸಂಸ್ಕೃತಿಯ ಕಾರಣದಿಂದ ವಿಶ್ವದ ವಿವಿಧ ಭಾಗಗಳಿಂದ ಜನರು ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಹೇಳಿದ ಅವರು, ಗಾರ್ಡನ್ ಸಿಟಿ ಎಂಬ ಗುರುತನ್ನು ನಗರ ಮೀರಿದ್ದರೂ, ಮುಂಬೈ ಸೇರಿದಂತೆ ಹಲವಾರು ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ಇನ್ನೂ ಹೆಚ್ಚು ಕೈಗೆಟುಕುವ ನಗರವಾಗಿದೆ ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಪ್ರತಿಕ್ರಿಯೆಗೆ ಕಾಕ್ರೋಚ್ ಕೆಂಡಾಮಂಡಲ; ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ - CJP

ನನ್ನ ಹೃದಯ ಚೂರಾಗಿದೆ: ಸಲ್ಮಾನ್ ಖಾನ್ ನಂತರ CJP ಪ್ರತಿಭಟನೆಗೆ ಆಲಿಯಾ ಭಟ್ ಬೆಂಬಲ!

CJP protest: ಪ್ರತಿಭಟನೆಗೆ ಅಡ್ಡಿಪಡಿಸಲು, ಕಲ್ಲು ತೂರಲು ಬಿಜೆಪಿ ಗೂಂಡಾಗಳನ್ನು ಕಳುಹಿಸಿದೆ; ಕೇಂದ್ರದ ವಿರುದ್ಧ ದೀಪ್ಕೆ ಕಿಡಿ

Video: ಐಷಾರಾಮಿ ಕ್ಯಾರಾವ್ಯಾನ್ ಬೆನ್ನಲ್ಲೇ ದುಬಾರಿ ಬೆಲೆಯ ಕಾರು ಖರೀದಿಸಿದ ಕಿಚ್ಚ ಸುದೀಪ್! ಬೆಲೆ ಎಷ್ಟು ಗೊತ್ತಾ?

ತಮಿಳುನಾಡಿನಾದ್ಯಂತ 'ಜನ ನಾಯಗನ್' ರಿಲೀಸ್; ಥಿಯೇಟರ್‌ಗಳಲ್ಲಿ ಕುಣಿದು ಕುಪ್ಪಳಿಸಿದ ವಿಜಯ್ ಅಭಿಮಾನಿಗಳು!