ಬೆಂಗಳೂರು: ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪುನರ್ವಸತಿ ಕೇಂದ್ರದ ಮಾಲೀಕ ಶಿವಲಿಂಗಯ್ಯ (60) ಅವರನ್ನು ಕೊಲೆ ಮಾಡಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ನ್ಯೂ ಲೈಫ್ ಪುನರ್ವಸತಿ ಕೇಂದ್ರ ವನ್ನು ಶಿವಲಿಂಗಯ್ಯ ನಡೆಸುತ್ತಿದ್ದರು. ನಿತಿನ್, ಕಾರ್ತಿಕ್, ಸೋಹೆಲ್ ಪಾಷಾ ಕೃತ್ಯ ಎಸಗಿರುವ ಶಂಕೆಯಿದ್ದು, ಅವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಬಿಸಿಸಿ ಬಡಾವಣೆಯಲ್ಲಿ ನ್ಯೂ ಲೈಫ್ ಪುನರ್ವಸತಿ ಕೇಂದ್ರವಿದ್ದು, ನಿತಿನ್ ಎಂಬಾತ ಕೆಲವು ತಿಂಗಳ ಹಿಂದೆ ಈ ಕೇಂದ್ರಕ್ಕೆ ದಾಖಲಾಗಿದ್ದ. ಕ್ರಮೇಣ ಮಾಲೀಕ ಶಿವಲಿಂಗಯ್ಯ ಅವರ ನಂಬಿಕೆ ಗಿಟ್ಟಿಸಿಕೊಂಡು ಕೇಂದ್ರದ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದ. ಎಲ್ಲ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದ.
ಶುಕ್ರವಾರ ಮಧ್ಯಾಹ್ನ ನಿತಿನ್ ಮತ್ತು ಇತರೆ ಆರೋಪಿಗಳು ಯಾವುದೋ ವಿಚಾರಕ್ಕೆಶಿವಲಿಂಗಯ್ಯ ಜೊತೆಗೆ ಜಗಳ ಮಾಡಿಕೊಂಡಿದ್ದರು. ಈ ವೇಳೆ ಮೊದಲ ಮಹಡಿಯ ರೂಮ್ ಬಾಗಿಲು ಹಾಕಿದ್ದ ಆರೋಪಿಗಳು, ಶಿವಲಿಂಗಯ್ಯನ ಮೇಲೆ ಮಾರಕಾಸ್ತ್ರ ಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದಶಿವಲಿಂಗಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆ ಬಳಿಕ ಸ್ಥಳದಿಂದ ಆರೋಪಿಗಳು ಬ್ಯಾಗ್ ಒಂದನ್ನ ತೆಗೆದುಕೊಂಡು ಹೋಗಿದ್ದಾರೆ. ಬ್ಯಾಗ್ನಲ್ಲಿ ಹಣವಿತ್ತಾ ಅಥವಾ ನಿತಿನ್ನ ಬಟ್ಟೆಗಳಿತ್ತಾ ಎಂದು ತನಿಖೆ ಮಾಡಲಾಗುತ್ತಿದೆ. ತುಂಬಾ ದಿನಗಳಿಂದ ಪ್ಲಾನ್ ಮಾಡಿದ್ದ ಬಗ್ಗೆ ಮಾಹಿತಿ ಇದ್ದು, ಮಾಲೀಕನ ಮಗ ಹಾಗೂ ಡ್ರೈವರ್ ಇಲ್ಲದ ಹಿನ್ನೆಲೆ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಸದ್ಯ ಚಂದ್ರಲೇಔಟ್ ಪೊಲೀಸರು ಮೂರು ತಂಡ ರಚಿಸಿ ಕೊಲೆಗಾರರಿಗೆ ಹುಡುಕಾಟ ನಡೆಸುತ್ತಿದ್ದಾರೆ.