ಬೆಂಗಳೂರು: ಭಾರತೀಯ ರೂಪಾಯಿಯನ್ನು ಕ್ರಿಪ್ಟೊ ಕರೆನ್ಸಿಗೆ ಬದಲಾವಣೆ ಮಾಡಿಕೊಡುವುದಾಗಿ ಹೇಳಿಕೆ ಉದ್ಯಮಿಯೊಬ್ಬರ ಮೇಲೆ ಹಲ್ಲೆ ನಡೆಸಿ 17. 64 ಲಕ್ಷ ರೂ. ಹಣ ದರೋಡೆ ಮಾಡಿದ್ದ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 13. 90 ಲಕ್ಷ ನಗದು, ಕೃತ್ಯಕ್ಕೆ ಬಳಸಿದ 6 ದ್ವಿಚಕ್ರ ವಾಹನ, ಒಂದು ಕಾರು ಮತ್ತು 13 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೋಡಿಗೆಹಳ್ಳಿ ನಿವಾಸಿ ಜೂನ್ 10 ರಂದು ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿತು ಎಂದು ಸಂಜಯ್ ನಗರ ಪೊಲೀಸರು ತಿಳಿಸಿದ್ದಾರೆ.
ಕೆಫೆ ಓಪನ್ ಮಾಡಲು ಯೋಜನೆ ಹಾಕಿಕೊಂಡು, ಕಿಚನ್ ಟೈಲ್ಸ್ ಮತ್ತಿತರ ವಸ್ತುಗಳನ್ನು ಇಂಟರ್ನೆಂಟ್ ನಲ್ಲಿ ಹುಡುಕುತ್ತಿದ್ದಾಗ ಇಂತಹ ವಸ್ತುಗಳನ್ನು ಜಪಾನ್ ಅಥವಾ ಚೈನಾ ದೇಶದಿಂದ ಕಡಿಮೆ ದರದಲ್ಲಿ ದೊರೆಯುತ್ತವೆ ಎಂಬುದನ್ನು ಅವರ ಸ್ನೇಹಿತರೊಬ್ಬರಿಂದ ತಿಳಿದುಕೊಂಡು ಕ್ರಿಪ್ಟೊ ಕರೆನ್ಸಿ ಪಾವತಿ ಬಗ್ಗೆ ಮಾಹಿತಿ ಪಡೆದು USDT ಕ್ರಿಪ್ಟೊ ಕರೆನ್ಸಿ ವ್ಯವಹಾರದ ವಾಟ್ಸಾಪ್ ಗ್ರೂಪ್ ಸೇರಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಾಟ್ಸಾಪ್ ಗ್ರೂಪ್ ಸದಸ್ಯರಲ್ಲಿ ಒಬ್ಬರ ಪರಿಚಯವಾಗಿ ಆತನು ಉದ್ಯಮಿಯ ಮನೆಗೆ ಬಂದು 2,50,000 ರೂ. ಹಣವನ್ನು ಯು.ಎಸ್.ಡಿ.ಟಿ ಕ್ರಿಪ್ಟೊ ಕರೆನ್ಸಿಗೆ ಬದಲಾವಣೆ ಮಾಡಿ ಕೊಟ್ಟು ಹೋಗಿದ್ದನು. ಉದ್ಯಮಿಗೆ ಹೆಚ್ಚಿನ ಕ್ರಿಪ್ಟೊ ಕರೆನ್ಸಿ ಅವಶ್ಯಕತೆ ಇರುವುದರಿಂದ ವಾಟ್ಸಾಪ್ ಮುಖಾಂತರ ಸಂಪರ್ಕಿಸಿ 17, 64,000 ರೂ. ಹಣವನ್ನು ಕ್ರಿಪ್ಟೊ ಕರೆನ್ಸಿಗೆ ಬದಲಾವಣೆ ಮಾಡಿಕೊಡುವಂತೆ ಕೇಳಿದ್ದನು.
ಉದ್ಯಮಿಯು ತಮ್ಮ ಹಾಗೂ ಸ್ನೇಹಿತರೊಂದಿಗೆ 17, 64,000 ರೂ. ಹಣವನ್ನು ತೆಗೆದುಕೊಂಡು ಸಂಜಯನಗರದ ಕಲ್ಪನಾ ಚಾವ್ಲಾ ರಸ್ತೆಗೆ ಬರಲು ತಿಳಿಸಿದ ಕಾರಣ ಸ್ಥಲಕ್ಕೆ ಬಂದಿದ್ದರು. ಹೇಳಿದ ಸಮಯಕ್ಕೆ ಬಂದ ಆರೋಪಿಗಳು ಹಣವನ್ನು ಕ್ರಿಪ್ಟೊ ಕರೆನ್ಸಿಗೆ ವರ್ಗಾವಣೆ ಮಾಡದೇ ಹಣವನ್ನು ಕಿತ್ತುಕೊಂಡು ಓಡಿ ಹೋಗಿದ್ದರು. ಈ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದು, ದೇವಸಂದ್ರದ ಬಳಿ 4 ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅವರು ನೀಡಿದ ಸುಳಿವಿನ ಆಧಾರದ ಮೇಲೆ ಒಟ್ಟು 12 ಆರೋಪಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಸದ್ಯ 12 ಮಂದಿ ಆರೋಪಿಗಳನ್ನು ಬಂಧಿಸಿದ್ದು, 13, 90,000 ರೂ. ನಗದು, ಕೃತ್ಯಕ್ಕೆ ಬಳಸಿದ ಆರು ದ್ವಿಚಕ್ರ ವಾಹನ, ಒಂದು ಕಾರು ಮತ್ತು 13 ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ನಿರಂತರ ವಿಚಾರಣೆ ವೇಳೆ ಉಳಿದ ಆರೋಪಿಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ತದ ನಂತರ ಇತರರನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ಮುಂದುವರೆದಿವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.