ಬೆಂಗಳೂರು: ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ತೆಲಂಗಾಣದ ಯುವ ಟೆಕ್ಕಿ ದಂಪತಿ ತಮ್ಮ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ತೆಲಂಗಾಣದ ಸಿದ್ದಿಪೇಟೆಯ ಸಾಫ್ಟ್ವೇರ್ ಇಂಜಿನಿಯರ್ ಭಾನು ಚಂದರ್ ರೆಡ್ಡಿ ಕುಂಟಾ (32) ಸೋಮವಾರ ತನ್ನ ಅಪಾರ್ಟ್ಮೆಂಟ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿಯ ರೂಮ್ ಲಾಕ್ ಆಗಿರುವುದನ್ನು ನೋಡಿದ ಅವರ ಪತ್ನಿ ಬೀಬಿ ಶಾಜಿಯಾ ಸಿರಾಜ್ (31) ಪದೇ ಪದೇ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಸೆಕ್ಯೂರಿಟಿ ಸಿಬ್ಬಂದಿ ಹಾಗೂ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ತದನಂತರ ನೆರೆಹೊರೆಯವರು ಬಂದು ಬಾಗಿಲು ತೆರೆದಾಗ ಭಾನು ಚಂದರ್ ರೆಡ್ಡಿ ಮೃತಪಟ್ಟಿರುವುದು ಕಂಡುಬಂದಿದೆ.
ಇದಾದ ಕೆಲವು ನಿಮಿಷಗಳ ನಂತರ ಶಾಜಿಯಾ ಅದೇ ವಸತಿ ಸಂಕೀರ್ಣದ 17 ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾಳೆ. ಈಕೆ ಪ್ರಮುಖ ಟೆಕ್ ಕಂಪನಿ IBMನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ತೆಲಂಗಾಣದ ಕುಟುಂಬ ಸದಸ್ಯರು ಸಲ್ಲಿಸಿದ ದೂರುಗಳ ಆಧಾರದ ಮೇಲೆ ಅಸಹಜ ಸಾವಿನ ಪ್ರಕರಣ ದಾಖಲಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದನ್ನು ತಿಳಿಯಲು ಮೃತದೇಹಗಳ ಮರಣೋತ್ತರ ಪರೀಕ್ಷೆಯ ವರದಿಗಳಿಗಾಗಿ ಕಾಯುತ್ತಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯೆ ತಡೆಗೆ ಸಹಾಯವಾಣಿ ಸಂಕಷ್ಟದ ಸಮಯದಲ್ಲಿ ಅಥವಾ ಮಾನಸಿಕವಾಗಿ ಕುಗ್ಗಿದಾಗ ಸಹಾಯ ಪಡೆಯುವುದು ಬಹಳ ಮುಖ್ಯ. ಯಾರಾದರೂ ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದರೆ ಅಥವಾ ಮಾನಸಿಕ ಒತ್ತಡದಲ್ಲಿದ್ದರೆ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ. ಇವುಗಳು 24/7 ಉಚಿತವಾಗಿ ಲಭ್ಯವಿವೆ:
ಟೆಲಿ-ಮಾನಸ (Tele-MANAS) - ರಾಷ್ಟ್ರೀಯ ಮಾನಸಿಕ ಆರೋಗ್ಯ ಸಹಾಯವಾಣಿ: 14416 ಅಥವಾ 1800-891-4416 (ಇದು ಭಾರತ ಸರ್ಕಾರದ 24 ಗಂಟೆಗಳ ಉಚಿತ ಸೇವೆಯಾಗಿದೆ).
ಆರೋಗ್ಯ ಸಹಾಯವಾಣಿ (ಕರ್ನಾಟಕ ಸರ್ಕಾರ): 104
ನಿಮ್ಹಾನ್ಸ್ (NIMHANS) ಸಹಾಯವಾಣಿ: 080-46110007 (ಮಾನಸಿಕ ಆರೋಗ್ಯ ಮತ್ತು ಮಾನಸಿಕ ಸಾಮಾಜಿಕ ಬೆಂಬಲಕ್ಕಾಗಿ).