ಬೆಂಗಳೂರು: 46 ವರ್ಷದ ವ್ಯಕ್ತಿಯೊಬ್ಬ ಮಹಿಳಾ ಉಪನ್ಯಾಸಕಿಯೊಬ್ಬರನ್ನು ಕೊಲೆ ಮಾಡಿ, ಕಾರಿಗೆ ಬೆಂಕಿ ಹಚ್ಚಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದು, ಮರುದಿನ ರೈಲ್ವೆ ಪೊಲೀಸರು ಆತನ ಮೃತದೇಹವನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೃತ ವ್ಯಕ್ತಿ ದೊಡ್ಡಬಳ್ಳಾಪುರ ನಿವಾಸಿ ರಾಮಾಂಜಿನಪ್ಪ ಎಂದು ಗುರುತಿಸಲಾಗಿದ್ದು, ತಹಶೀಲ್ದಾರ್ ಕಚೇರಿಯಲ್ಲಿ ಗುತ್ತಿಗೆ ಕೆಲಸಗಾರನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ವಿವಾಹಿತನಾಗಿದ್ದ ಮತ್ತು ಪತ್ನಿಯಿಂದ ಬೇರ್ಪಟ್ಟಿದ್ದ ರಾಮಾಂಜಿನಪ್ಪ, ಸರೋಜಾ(40) ಎಂಬ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಆದರೆ ಮದುವೆ ಆಗಲು ನಿರಾಕರಿಸಿದ ಕಾರಣಕ್ಕೆ ತನ್ನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಭೀಕರವಾಗಿ ಕೊಲಗೈದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನ ಹೊರವಲಯದಲ್ಲಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಬಶೆಟ್ಟಿ ಕೈಗಾರಿಕಾ ಪ್ರದೇಶದ ಬಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟ ಕಾರಿನೊಳಗೆ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರೋಜಾ ಕೂಡ ವಿವಾಹಿತಳಾಗಿದ್ದು, ಒಬ್ಬ ಮಗನಿದ್ದ. ದೇವನಹಳ್ಳಿ ಬಳಿಯ ಖಾಸಗಿ ಕಾಲೇಜೊಂದರ ಅತಿಥಿ ಉಪನ್ಯಾಸಕಿಯಾಗಿದ್ದ ಸರೋಜಾ ಮತ್ತು ರಾಮಾಂಜಿನಪ್ಪ ಕಳೆದೊಂದು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದರು.
ಪೊಲೀಸರ ಪ್ರಕಾರ, ಶನಿವಾರ, ಆ ವ್ಯಕ್ತಿ ತನಗೆ ವೈದ್ಯಕೀಯ ತುರ್ತು ಅಗತ್ಯ ಇದೆ ಮತ್ತು ಆಸ್ಪತ್ರೆಗೆ ಭೇಟಿ ಹೋಗಬೇಕಾಗಿದೆ ಎಂದು ಹೇಳಿ ಪರಿಚಯಸ್ಥರಿಂದ ಕಾರನ್ನು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ದೇವನಹಳ್ಳಿಯ ಬಸ್ ನಿಲ್ದಾಣದಿಂದ ಆ ವ್ಯಕ್ತಿ ಉಪನ್ಯಾಸಕಿಯನ್ನು ಕರೆದುಕೊಂಡು ಹೋಗಿದ್ದು, ಇಬ್ಬರೂ ನಂದಿ ಬೆಟ್ಟ ಮತ್ತು ಹತ್ತಿರದ ಪ್ರದೇಶಗಳಲ್ಲಿ ಒಂದೆರಡು ಗಂಟೆಗಳ ಕಾಲ ಕಾರಿನಲ್ಲಿ ಸುತ್ತಾಡಿದ್ದಾರೆ. ನಂತರ, ದೊಡ್ಡಬಳ್ಳಾಪುರದ ನಿರ್ಜನ ಸ್ಥಳದಲ್ಲಿ ಕಾರು ನಿಲ್ಲಿಸಿದ್ದು, ಅಲ್ಲಿ ಕಾರಿನೊಳಗೆ ಜಗಳ ನಡೆದಿದೆ. ನಂತರ ಸುತ್ತಿಗೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ ಬಳಿಕ ಕಾರಿಗೂ ಬೆಂಕಿ ಹಚ್ಚಿದ್ದಾನೆ ಎಂದು ಪ್ರಾಥಮಿಕ ತನಿಖೆ ಉಲ್ಲೇಖಿಸಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರೋಜಾ ಕೊಲೆ ಬಳಿಕ ಆರೋಪಿ ರಾಮಾಂಜಿನಪ್ಪ ಕೂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರೈಲ್ವೆ ಪೊಲೀಸರು ಬಿಡದಿಯ ರೈಲ್ವೆ ಹಳಿಗಳ ಬಳಿ ರಾಮಾಂಜಿನಪ್ಪ ಅವರ ಶವ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.