ಮೈಸೂರು: ದೇಶದ ಪ್ರಗತಿಗೆ ಸಾಮಾಜಿಕ ಸೌಹಾರ್ದತೆ ಮತ್ತು ಭಾವೈಕ್ಯತೆ ಅತ್ಯಗತ್ಯ. ಹೀಗಾಗಿ ಜಾತಿ ಮತ್ತು ಧರ್ಮದ ಭೇದಗಳನ್ನು ಮೀರಿ ಸಮಾಜ ಒಗ್ಗಟ್ಟಿನಿಂದ ಸಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಂಚಾಲಕ ಮೋಹನ್ ಭಾಗವತ್ ಅವರು ಗುರುವಾರ ಕರೆ ನೀಡಿದರು.
ಮೈಸೂರಿನಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವ ಉಪನ್ಯಾಸ ಸರಣಿಯ ಭಾಗವಾಗಿ "ರಾಷ್ಟ್ರೀಯ ಅಭಿವೃದ್ಧಿಗೆ ವೇಗವರ್ಧಕವಾಗಿ ಸಾಮಾಜಿಕ ಸಾಮರಸ್ಯ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
“ಭಾರತದ ‘ಸಮಾಜ’ ಎಂಬ ಕಲ್ಪನೆ ಪಾಶ್ಚಾತ್ಯರ ಸಮಾಜದ ಕಲ್ಪನೆಯಿಗಿಂತ ವಿಭಿನ್ನವಾಗಿದೆ. ಸಮಾಜ ಎಂದರೆ ಕೇವಲ ಜನರ ಗುಂಪಲ್ಲ, ಅದು ಏಕತೆಯ ಭಾವನೆ ಎಂದು ಹೇಳಿದರು.
ಇದೇ ವೇಳೆ ಸ್ವಾಮಿ ವಿವೇಕಾನಂದರನ್ನು ಉಲ್ಲೇಖ ಮಾಡಿದ ಭಾಗವತ್ ಅವರು, “ಪ್ರತಿ ರಾಷ್ಟ್ರಕ್ಕೂ ಒಂದು ಧ್ಯೇಯವಿದೆ. ನಮ್ಮ ಪಾಲಿಗೆ ಈ ನೆಲ ಮಾತೃಭೂಮಿ. ನಮ್ಮ ಪೂರ್ವಜರೇ ಈ ರಾಷ್ಟ್ರದ ಅಸ್ತಿತ್ವ ನಿರ್ಮಿಸಿದ್ದಾರೆ ಎಂದರು.
ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಪ್ರಗತಿ ಅಲ್ಲ, ಅದು ಸಮಾಜದ ಕೊನೆಯ ವ್ಯಕ್ತಿಗೂ ತಲುಪುವ ಸಮಗ್ರ ಬೆಳವಣಿಗೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಸಮಾನತೆ ಇಲ್ಲದೆ ರಾಜಕೀಯ ಮತ್ತು ಆರ್ಥಿಕ ಸಮಾನತೆ ಉಳಿಯಲು ಸಾಧ್ಯವಿಲ್ಲ ಎಂದ ಅವರು, ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರಗಳನ್ನು ಸ್ಮರಿಸಿದರು.
ಜಾತಿ ಭೇದ ನಿರ್ಮೂಲನೆಗಾಗಿ ವರ್ತನೆಯಲ್ಲಿ ಬದಲಾವಣೆ ಅಗತ್ಯ, ವಿಭಿನ್ನ ಸಮುದಾಯದವರ ಮನೆಗಳಿಗೆ ಭೇಟಿ ನೀಡಿ, ಸ್ನೇಹ ಬೆಳೆಸಿ, ದೈನಂದಿನ ಬದುಕಿನಲ್ಲಿ ಸೌಹಾರ್ದತೆಯನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ರಾಜಕೀಯದಲ್ಲಿ ಜಾತಿಯ ಬಳಕೆ ಕುರಿತು ಮಾತನಾಡಿದ ಅವರು, “ಸಮಾಜ ಜಾತಿಯನ್ನು ಮರೆತರೆ ರಾಜಕೀಯವೂ ಜಾತಿಯನ್ನು ಮರೆತುಬಿಡುತ್ತದೆ. ಅಂತರ್ಜಾತಿ ವಿವಾಹಗಳು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುತ್ತವೆ ಎಂದು ಹೇಳಿದರು.
ಧರ್ಮಗಳ ನಡುವಿನ ಸೌಹಾರ್ದತೆ ಮಾನವಕುಲದ ಉಳಿವಿಗೆ ಅಗತ್ಯ, ಎಲ್ಲ ಧರ್ಮಗಳ ಗುರಿಯೂ ಒಂದೇ ಸತ್ಯವನ್ನು ಹುಡುಕುವುದು. ಮಾರ್ಗಗಳು ವಿಭಿನ್ನವಾಗಿರಬಹುದು. ಧರ್ಮಗಳು ಮತ್ತು ಸಮುದಾಯಗಳ ನಡುವೆ ಸಾಮರಸ್ಯವಿಲ್ಲದಿದ್ದರೆ, ನಾವು ನಮ್ಮನ್ನು ನಾಶಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಜನಸಂಖ್ಯೆ ನಿಯಂತ್ರಣ ಮಸೂದೆ ಹಾಗೂ ಏಕಸಮಾನ ನಾಗರಿಕ ಸಂಹಿತೆ (UCC) ಕುರಿತು ಮಾತನಾಡಿ, ಸರ್ಕಾರವು ಮುಂದಿನ ನೂರು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ದೀರ್ಘಕಾಲೀನ ನೀತಿಗಳನ್ನು ರೂಪಿಸಬೇಕು, ಅದೇ ಸಮಯದಲ್ಲಿ ತಾರತಮ್ಯವಿಲ್ಲದೆ ಜಾಗೃತಿ ಮತ್ತು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು. ಇದೇ ವೇಳೆ ಯುಸಿಸಿ ಕ್ರಮೇಣ ದೇಶಾದ್ಯಂತ ಜಾರಿಯಾಗಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು