ಬೆಂಗಳೂರು: ಉದ್ಯಮ್ ಲರ್ನಿಂಗ್ ಫೌಂಡೇಶನ್ನ ಉಪಕ್ರಮವಾದ ‘ಉದ್ಯಮ್ ವ್ಯಾಪಾರ್’ (Udhyam Vyapaar) ಯೋಜನೆ ಬೆಂಗಳೂರಿನ ಬೀದಿ ಆಹಾರ ವ್ಯಾಪಾರಿಗಳಿಗೆ ಹೊಸ ಚೈತನ್ಯ ನೀಡಿದೆ.
ಸ್ಥಳೀಯ ಆಹಾರ ಮಾರಾಟಗಾರರಿಗೆ ಪ್ರಾಯೋಗಿಕ ತರಬೇತಿ, ವ್ಯಾಪಾರ ಮಾರ್ಗದರ್ಶನ ಹಾಗೂ ಮೂಲಸೌಕರ್ಯ ಸುಧಾರಣೆಗಳ ಮೂಲಕ ಅವರ ಆದಾಯ ಹೆಚ್ಚಿಸಲು ಉದ್ಯಮ್ ವ್ಯಾಪಾರ್ ಯೋಜನೆ ಸಹಕಾರ ನೀಡುತ್ತಿದೆ.
2025ರಲ್ಲಿ ಆರಂಭವಾದ ಈ ಯೋಜನೆ ಈಗಾಗಲೇ ನಗರದಲ್ಲಿನ 350ಕ್ಕೂ ಹೆಚ್ಚು ವ್ಯಾಪಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಪ್ರತಿಯೊಬ್ಬ ವ್ಯಾಪಾರಿಯ ದಿನನಿತ್ಯದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಗ್ರಾಹಕ ಸೇವೆ, ಕಾರ್ಯಕ್ಷಮತೆ ಮತ್ತು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಪರಿಹಾರಗಳನ್ನು ಯೋಜನೆಯಡಿ ಒದಗಿಸಲಾಗುತ್ತಿದೆ.
ಯೋಜನೆಯಡಿ ಅಡುಗೆ ಸಾಮರ್ಥ್ಯ ಹೆಚ್ಚಿಸುವುದು, ಉತ್ತಮ ಲೈಟಿಂಗ್ ಮತ್ತು ಬ್ರಾಂಡಿಂಗ್ ವ್ಯವಸ್ಥೆ, ಕುಳಿತುಕೊಳ್ಳುವ ವ್ಯವಸ್ಥೆ, ಮಳೆ-ಗಾಳಿ ತಡೆಯುವ ಶೆಡ್ಗಳು, ಮೆನು ಅಭಿವೃದ್ಧಿ, ಸ್ವಚ್ಛತೆ ಮತ್ತು ಆಹಾರದ ಪ್ರಸ್ತುತೀಕರಣ ಸುಧಾರಣೆ ಸೇರಿದಂತೆ ಡಿಜಿಟಲ್ ಪ್ರಚಾರಕ್ಕೂ ಸಹಾಯ ನೀಡಲಾಗುತ್ತಿದೆ.
ಈ ಯೋಜನೆಗೆ ಸೇರಿದ ವ್ಯಾಪಾರಿಗಳಲ್ಲಿ ಗ್ರಾಹಕರ ಸಂಖ್ಯೆ ಸರಾಸರಿ ಶೇ.24ರಷ್ಟು ಹೆಚ್ಚಿದ್ದು, ಆದಾಯದಲ್ಲಿ ಶೇ.33ರಷ್ಟು ಏರಿಕೆ ಕಂಡುಬಂದಿದೆ ಎಂದು ಉದ್ಯಮ್ ವ್ಯಪಾರ್ ನಿರ್ದೇಶಕ ಕೃಷ್ಣನ್ ರಂಗನಾಥನ್ ಅವರು ತಿಳಿಸಿದ್ದಾರೆ.
“ಭಾರತದಲ್ಲಿ ಸುಮಾರು 50 ಲಕ್ಷ ಬೀದಿ ಆಹಾರ ವ್ಯಾಪಾರಿಗಳಿದ್ದು, ಇದು ದೇಶದ ಅತಿದೊಡ್ಡ ನ್ಯಾನೋ ಉದ್ಯಮಿಗಳ ವಲಯಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ ಪ್ರತೀನಿತ್ಯ ಸುಮಾರು 60 ರಿಂದ 80 ಲಕ್ಷ ಜನರು ನಿಯಮಿತವಾಗಿ ಬೀದಿಬದಿಯಲ್ಲಿ ಮಾರಾಟ ಮಾಡುವ ಆಹಾರ ಸೇವಿಸುತ್ತಾರೆ. ಆದರೆ, ಹೆಚ್ಚಿನ ವ್ಯಾಪಾರಿಗಳು ಸೂಕ್ತ ಮೂಲಸೌಕರ್ಯ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ತಮ್ಮ ಸಂಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.
ಈ ಯೋಜನೆ ಮುಖ್ಯವಾಗಿ ತಿಂಗಳಿಗೆ ರೂ.30,000 ಕ್ಕಿಂತ ಕಡಿಮೆ ಆದಾಯ ಗಳಿಸುವ ವ್ಯಾಪಾರಿಗಳ ಮೇಲೆ ಕೇಂದ್ರೀಕರಿಸಿದೆ. ಹೆಚ್ಚಿನವರು ಅಗತ್ಯದ ಕಾರಣದಿಂದಲೇ ಈ ಉದ್ಯಮಕ್ಕೆ ಬಂದವರಾಗಿದ್ದಾರೆಂದು ಹೇಳಿದ್ದಾರೆ.
ಕೊಣನಕುಂಟೆ ಕ್ರಾಸ್ ಸಮೀಪ ಅಂಗಡಿ ನಡೆಸುತ್ತಿರುವ ರೇಣುಕಾ ದೇವಿ ಅವರಿಗೆ ಗ್ರಾಹಕರ ಸಂಖ್ಯೆ ಹೆಚ್ಚಿದ್ದರೂ, ಅಡುಗೆ ಸಾಮರ್ಥ್ಯ ಕಡಿಮೆ ಇದ್ದ ಕಾರಣ ಬೇಡಿಕೆಯನ್ನು ಪೂರೈಸಲು ಕಷ್ಟವಾಗುತ್ತಿತ್ತು.
ಉದ್ಯಮ್ ವ್ಯಾಪಾರ್ ನೆರವಿನಿಂದ ಅವರ ಎರಡು ಬರ್ನರ್ ಸ್ಟೌವ್ ಅನ್ನು ಮೂರು ಬರ್ನರ್ ಸ್ಟೌವ್ ಆಗಿ ನವೀಕರಿಸಲಾಗಿದ್ದು, ಇದರಿಂದ ವೇಗವಾಗಿ ಅಡುಗೆ ಮಾಡಲು ಸಾಧ್ಯವಾಗಿ ಗ್ರಾಹಕರ ನಿರೀಕ್ಷಾ ಸಮಯ ಕಡಿಮೆಯಾಗಿದೆ.
“ಹಿಂದೆ ಗರಿಷ್ಠ ಸಮಯದಲ್ಲಿ ಗ್ರಾಹಕರಿಗೆ ಬೇಗ ಆಹಾರ ನೀಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಹೆಚ್ಚುವರಿ ಬರ್ನರ್ ಹಾಗೂ ಇತರ ಸುಧಾರಣೆಗಳಿಂದ ಹೆಚ್ಚು ಜನರಿಗೆ ತಡವಿಲ್ಲದೆ ಸೇವೆ ನೀಡಲು ಸಾಧ್ಯವಾಗಿದೆ. ಗ್ರಾಹಕರು ಸಂತೋಷವಾಗಿದ್ದು, ಆದಾಯವೂ ಹೆಚ್ಚಾಗಿದೆ ಎಂದು ರೇಣುಕಾ ದೇವಿ ಅವರು ಹೇಳಿದ್ದಾರೆ.
ಯೋಜನೆ ಸಾಂಪ್ರದಾಯಿಕ ಕೌಶಲ್ಯ ಕಾರ್ಯಕ್ರಮಗಳಿಗಿಂತ ಭಿನ್ನವಾಗಿದೆ. ಇಲ್ಲಿ ತರಬೇತಿ ನೀಡುವುದಷ್ಟೇ ಅಲ್ಲದೆ, ವ್ಯಾಪಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಫಲಿತಾಂಶ ತರುವತ್ತ ಗಮನ ಹರಿಸಲಾಗುತ್ತದೆ ಎಂದು ಕೃಷ್ಣನ್ ರಂಗನಾಥನ್ ಹೇಳಿದ್ದಾರೆ.
ಇದು ಲಾಭರಹಿತ ಯೋಜನೆಯಾಗಿರುವುದರಿಂದ ವ್ಯಾಪಾರಿಗಳಿಂದ ಯಾವುದೇ ಶುಲ್ಕ ವಸೂಲಿಸಲಾಗುವುದಿಲ್ಲ. ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರಿನ 5,000 ವ್ಯಾಪಾರಿಗಳನ್ನು ಸಬಲಗೊಳಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ತಿಳಿಸಿದ್ದಾರೆ.