ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ದೂರವಾಣಿ ಮೂಲಕ ಅಭಿನಂದನೆ ತಿಳಿಸಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವಿಜಯ್ ಅವರಿಗೆ ದೂರವಾಣಿ ಕರೆ ಮಾಡಿದ ಸಿದ್ದರಾಮಯ್ಯ ಅವರು, “ನೀವು ಇತಿಹಾಸ ನಿರ್ಮಿಸಿದ್ದೀರಿ” ಎಂದು ಶ್ಲಾಘಿಸಿದರು. ಜೊತೆಗೆ “ಬೆಂಗಳೂರಿಗೆ ಯಾವಾಗ ಬರುತ್ತೀರಿ?” ಎಂದು ಆತ್ಮೀಯವಾಗಿ ಪ್ರಶ್ನಿಸಿ, ಆಹ್ವಾನವನ್ನೂ ನೀಡಿದ್ದಾರೆ.
ಚಿತ್ರರಂಗದಿಂದ ರಾಜಕೀಯಕ್ಕೆ ಬಂದ ವಿಜಯ್, ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜಕೀಯ ನಾಯಕರು ಹಾಗೂ ಅಭಿಮಾನಿಗಳಿಂದ ವಿಜಯ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇದಲ್ಲದೆ, ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲೂ ಶುಭಕೋರಿರುವ ಸಿದ್ದರಾಮಯ್ಯ ಅವರು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಆಳವಾದ ನಾಗರಿಕ ಸಂಬಂಧಗಳು ಹಾಗೂ ಸಾಂಸ್ಕೃತಿಕ ಸಾಮ್ಯತೆಯನ್ನು ಹಂಚಿಕೊಂಡಿವೆ. ಎರಡು ರಾಜ್ಯಗಳು ಸಾಮಾಜಿಕ ನ್ಯಾಯ, ಒಳಗೊಳ್ಳುವ ಬೆಳವಣಿಗೆ ಮತ್ತು ಒಕ್ಕೂಟ ಸಹಕಾರಕ್ಕಾಗಿ ಸಮಾನ ಆಕಾಂಕ್ಷೆಗಳನ್ನು ಹೊಂದಿವೆ. ಉಭಯ ರಾಜ್ಯಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಪಾರಂಪರಿಕ ಮೌಲ್ಯಗಳನ್ನು ಎತ್ತಿಹಿಡಿಯಲು ವಿಜಯ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಜಾತ್ಯತೀತತೆ, ಸಾಂವಿಧಾನಿಕ ಮೌಲ್ಯಗಳನ್ನು ಮುನ್ನಡೆಸಲು ಹಾಗೂ ವಿಭಜಕ ಮತ್ತು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧದ ಸಾಮೂಹಿಕ ಹೋರಾಟಕ್ಕಾಗಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ತಮಿಳುನಾಡಿನ ಜನರ ಸೇವೆಯಲ್ಲಿ ವಿಜಯ್ ಅವರ ಅಧಿಕಾರಾವಧಿಯು ಯಶಸ್ವಿ ಮತ್ತು ಪರಿವರ್ತನೆಯ ಹಾದಿಯಾಗಲಿ ಎಂದು ಶುಭ ಹಾರೈಸಿದ್ದಾರೆ.
ಈ ಸಂದೇಶದ ಮೂಲಕ ಸಿದ್ದರಾಮಯ್ಯ ಅವರು ನೆರೆಯ ರಾಜ್ಯದ ನೂತನ ನಾಯಕನೊಂದಿಗೆ ಸೌಹಾರ್ದಯುತ ಸಂಬಂಧವನ್ನು ವೃದ್ಧಿಸುವ ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಗಾಗಿ ಒಂದಾಗಿ ಶ್ರಮಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.