ಬೆಂಗಳೂರು: ಬಿಡದಿ ಬಳಿಯ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಪಟ್ಟಣ ಯೋಜನೆಯನ್ನು ಕರ್ನಾಟಕ ಸರ್ಕಾರವು "ಅಧಿಕೃತ ರಿಯಲ್ ಎಸ್ಟೇಟ್ ವ್ಯವಹಾರ"ವನ್ನಾಗಿ ಪರಿವರ್ತಿಸುತ್ತಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ನಗರಾಭಿವೃದ್ಧಿ, ಸಮಗ್ರ ಪಟ್ಟಣಗಳು ಮತ್ತು ವ್ಯಾಪಾರ ಕಾರಿಡಾರ್ಗಳ ನೆಪದಲ್ಲಿ ಸರ್ಕಾರ ಎಂಟು ಹಳ್ಳಿಗಳ ಫಲವತ್ತಾದ ಕೃಷಿ ಭೂಮಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಬಿಡದಿ ಟೌನ್ಶಿಪ್ನಲ್ಲಿ ನಿವೇಶನ ಮಾರಾಟ, ತೆರಿಗೆ ಮತ್ತಿತರ ಮೂಲಗಳಿಂದ 15 ವರ್ಷಗಳಲ್ಲಿ ₹33,000 ಕೋಟಿ ಆದಾಯ ಬರುತ್ತದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲೂ ಇದನ್ನು ಒಪ್ಪಿದ್ದಾರೆ. ಸರ್ಕಾರ ರಿಯಲ್ ಎಸ್ಟೇಟ್ ದಲ್ಲಾಳಿಯ ಕೆಲಸ ಮಾಡುತ್ತಿದೆ ಎಂದರು.
ಬಿಡದಿಯ ಈಗಲ್ಟನ್ ರೆಸಾರ್ಟ್ ಸುತ್ತಮುತ್ತಲಿನ ಗ್ರಾಮಗಳನ್ನೇ ಟೌನ್ಶಿಪ್ಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೆಸಾರ್ಟ್ ಒಟ್ಟು 77 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿತ್ತು. ಆ ಜಮೀನಿಗೆ ತಲಾ ಎಕರೆಗೆ ₹12 ಕೋಟಿಯಂತೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಯಾವುದೋ ಒಬ್ಬ ವ್ಯಕ್ತಿಯ ದಾಕ್ಷಿಣ್ಯಕ್ಕೆ ಬಲಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಯಲ್ ಎಸ್ಟೇಟ್ ದಲ್ಲಾಳಿ ಆಗಬಾರದು. ಆ ವ್ಯಕ್ತಿ ಹೇಳಿದಂತೆ ಕೇಳಿದರೆ ಇನ್ನೂ ಎರಡು ವರ್ಷ ಕುರ್ಚಿ ಉಳಿಯಬಹುದು ಎಂದು ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ತಮ್ಮ ಸಹಿಯನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಅವರು ಅಧಿಕಾರದ ಕೊನೆಯ ಗಾಲದಲ್ಲಿ ಹೆಸರು ಕೆಡಿಸಿಕೊಳ್ಳದೆ ಹೋಗಿ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ
2006ರಲ್ಲಿ ನಾನು ಬೆಂಗಳೂರಿನ ಸುತ್ತ ಐದು ಟೌನ್ಶಿಪ್ಗಳನ್ನು ನಿರ್ಮಾಣ ಮಾಡಲು ಆದೇಶ ಹೊರಡಿಸಿದ್ದೆ. ಅದರ ವಿರುದ್ಧ ಕಾಂಗ್ರೆಸ್ನ ಎಚ್.ಕೆ.ಪಾಟೀಲರ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚಿಸಿ, ಒಂದು ವರದಿ ಸಿದ್ಧಪಡಿಸಿದ್ದರು. ಆಗ ಟೌನ್ಶಿಪ್ ವಿರೋಧಿಸಿದ್ದವರು ಈಗ ತಾವೇ ಬಿಡದಿ ಟೌನ್ಶಿಪ್ ನಿರ್ಮಿಸಲು ಹೊರಟಿದ್ದಾರೆ. ಕಾನೂನು ತಜ್ಞ ಎಚ್.ಕೆ.ಪಾಟೀಲರು ತಮ್ಮ ಸತ್ಯಶೋಧನಾ ಸಮಿತಿ ವರದಿಯನ್ನು ಜನರ ಮುಂದೆ ಇಡಲಿ ಎಂದು ಸವಾಲು ಹಾಕಿದರು.
ಏಪ್ರಿಲ್ 30 ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿ 18,133 ಕೋಟಿ ರೂ. ವೆಚ್ಚದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಸಬರ್ಬನ್ ಯೋಜನೆ ಉಲ್ಲೇಖಿಸಿದ ಕುಮಾರಸ್ವಾಮಿ ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ರಾಮನಗರ ತಾಲ್ಲೂಕಿನ ಒಂಬತ್ತು ಹಳ್ಳಿಗಳಲ್ಲಿ ಸುಮಾರು 7,481 ಎಕರೆ ಪ್ರದೇಶವನ್ನು ಈ ಯೋಜನೆಯು ಒಳಗೊಂಡಿದೆ ಎಂದು ತಿಳಿಸಿದರು.
ನಗರದ ಮೂಲಸೌಕರ್ಯ ಸಮಸ್ಯೆಗಳನ್ನು ಅಧ್ಯಯನ ಮಾಡಿದ ನಂತರ 2006 ರಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಸಮಗ್ರ ಪಟ್ಟಣಗಳನ್ನು ಪ್ರಸ್ತಾಪಿಸಿದ್ದೆ. ಹೊಸಕೋಟೆ, ಸೋಲೂರು ಮತ್ತು ಸಾತನೂರು ಸೇರಿದಂತೆ ಐದು ಸ್ಥಳಗಳಲ್ಲಿ ಅಂತಹ ಐದು ಪಟ್ಟಣಗಳ ನಿರ್ಮಾಣಕ್ಕೆ ಯೋಜಿಸಿದ್ದೆ ಎಂದು ಕೇಂದ್ರ ಸಚಿವರು ಹೇಳಿದರು.
ಬಿಡದಿ, ಬೈಲಮಂಗಲ, ಹೊಸೂರು, ತೆಂಚಗಾರನಹಳ್ಳಿ ಸೇರಿದಂತೆ ಎಂಟು ಗ್ರಾಮಗಳನ್ನು ಒಳಗೊಂಡ ಯೋಜನೆಯನ್ನು ಸರ್ಕಾರ ಹೊಸದಾಗಿ ಘೋಷಿಸಿದಂತಿದೆ. ಆದರೆ ಈ ಯೋಜನೆಯ ಮೂಲ ಪರಿಕಲ್ಪನೆ ತಮ್ಮ ಆಡಳಿತಾವಧಿಯಲ್ಲೇ ರೂಪಿತವಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು. “ನಾನು 2006ರಲ್ಲೇ ಐದು ಟೌನ್ಶಿಪ್ ನಿರ್ಮಾಣದ ನಿರ್ಧಾರ ಕೈಗೊಂಡಿದ್ದೆ. ಬೆಂಗಳೂರಿನ ಭವಿಷ್ಯದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸಕೋಟೆ, ಸೋಲೂರು ಹಾಗೂ ಸಾತನೂರು ಭಾಗಗಳಲ್ಲಿ ಪ್ರಕ್ರಿಯೆ ಆರಂಭಿಸಿದ್ದೆ,” ಎಂದರು.
ಯೋಜನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ ಕುಮಾರಸ್ವಾಮಿ, ಸ್ವಾಧೀನ ಪ್ರಕ್ರಿಯೆಯ ವಿರುದ್ಧ ಪ್ರತಿಭಟಿಸುವ ರೈತರೊಂದಿಗೆ ದೃಢವಾಗಿ ನಿಲ್ಲುವುದಾಗಿ ಹೇಳಿದರು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ "ರೈತರ ಮನೆಗಳನ್ನು ನಾಶಮಾಡಬೇಡಿ" ಎಂದು ಸರ್ಕಾರವನ್ನು ಒತ್ತಾಯಿಸಿದರು.