ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ‘ಹಿಂದುತ್ವ ಮೃದು ಧೋರಣೆ’ ಅನುಸರಿಸುತ್ತಿದೆ ಎಂದು ಆರೋಪಿಸಿದ ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟ, ಗೋಹತ್ಯೆ ನಿಷೇಧ ರದ್ದು ಮಾಡು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.
ನಗರದ ಟೌನ್ ಹಾಲ್ನಲ್ಲಿ ಶನಿವಾರ ನಡೆದ ಮುಸ್ಲಿಂ ಸಂಘಟನೆಗಳ ಸಮಾವೇಶದಲ್ಲಿ ಸಮುದಾಯದ ರಾಜಕೀಯ ಪ್ರತಿನಿಧಿತ್ವ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಾಯಿತು.
ಇದೇ ವೇಳೆ ‘ಕಾಂಗ್ರೆಸ್ ಸರ್ಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?’ ಎಂಬ ವರದಿ ಮತ್ತು ಆಗ್ರಹಗಳ ಪಟ್ಟಿ ಬಿಡುಗಡೆ ಮಾಡಿ, ಕಾಲಮಿತಿಯಲ್ಲಿ ಈಡೇರಿಸುವಂತೆ ಆಗ್ರಹಿಸಿತು.
ಈ ವರದಿಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೂ ತಲುಪಿಸಲು ಸಮಾವೇಶ ನಿರ್ಧಾರ ಕೈಗೊಂಡಿತು.
ಜಾತಿ ಮತ್ತು ಧರ್ಮದ ಆಧಾರದಲ್ಲಿ ದ್ವೇಷ ಹಾಗೂ ಸಾಮುದಾಯಿಕ ವಿಭಜನೆ ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ ಸರ್ಕಾರ ಅದನ್ನು ಜಾರಿಗೊಳಿಸಲು ವಿಫಲವಾಗಿದೆ ಎಂದು ಸಮುದಾಯದ ನಾಯಕರು ಆರೋಪಿಸಿದರು.
ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ತೆರವುಗೊಳಿಸುವ ಕುರಿತು ಸರ್ಕಾರ ಇನ್ನೂ ಅಧಿಕೃತ ಆದೇಶ ಹೊರಡಿಸಿಲ್ಲ. ಜೊತೆಗೆ ಮುಸ್ಲಿಮರಿಗೆ 2B ವರ್ಗದಡಿ ನೀಡಲಾಗಿದ್ದ 4% ಮೀಸಲಾತಿಯನ್ನು ಸಂಪೂರ್ಣವಾಗಿ ಮರುಸ್ಥಾಪಿಸಲಾಗಿಲ್ಲ , ಅದನ್ನು 8%ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಇನ್ನೂ ರದ್ದುಗೊಳಿಸಿಲ್ಲ. ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರು, ಮಾಂಸ ವ್ಯಾಪಾರಿಗಳು, ಕಾರ್ಮಿಕರು ಮತ್ತು ಸಾರಿಗೆ ವಲಯದವರ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ.
ನೈತಿಕ ಪೊಲೀಸ್ ಗಿರಿ, ಆರ್ಥಿಕ ಬಹಿಷ್ಕಾರ ಅಭಿಯಾನಗಳು, ಸಾಮುದಾಯಿಕ ಮೆರವಣಿಗೆಗಳು ಹಾಗೂ ಗೋರಕ್ಷಕರ ಚಟುವಟಿಕೆಗಳ ಕುರಿತು ಸಮಾವೇಶದಲ್ಲಿ ಪ್ರಶ್ನಿಸಲಾಯಿತು.
ಶಾಸನ ಮಂಡಳಿಗಳು, ಸರ್ಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮತ್ತು ಸರ್ಕಾರಿ ನೇಮಕಾತಿಗಳಲ್ಲಿ ಮುಸ್ಲಿಮರಿಗೆ ಸಮರ್ಪಕ ಪ್ರತಿನಿಧಿತ್ವ ಸಿಗುತ್ತಿಲ್ಲ, ಜನಸಂಖ್ಯೆಗೆ ಅನುಗುಣವಾದ ರಾಜಕೀಯ ಪಾಲುದಾರಿಕೆ ನೀಡಬೇಕೆಂದು ಒತ್ತಾಯಿದರು.
ಅಲ್ಪಸಂಖ್ಯಾತ ಕಲ್ಯಾಣಕ್ಕಾಗಿ ಘೋಷಿಸಿದ್ದ ರೂ.10 ಸಾವಿರ ಕೋಟಿ ಯೋಜನೆ ಸಂಪೂರ್ಣ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ನಾಯಕರು, ಸರ್ಕಾರಿ ಟೆಂಡರ್ಗಳಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ನೀಡಿರುವುದನ್ನು ಸ್ವಾಗತಿಸಿದರು.
ವಕ್ಫ್ ಆಸ್ತಿಗಳ ಅತಿಕ್ರಮಣ, ಸಮರ್ಪಕ ರಕ್ಷಣೆ ಕೊರತೆ, ಆಸ್ತಿ ನಿರ್ವಹಣೆಯ ದುರ್ಬಲತೆ, ನ್ಯಾಯಮಂಡಳಿಗಳ ಸಮಸ್ಯೆ ಹಾಗೂ ದುರಸ್ತಿ ಮತ್ತು ವ್ಯಾಜ್ಯಗಳ ವಿಳಂಬದ ವಿಚಾರಗಳನ್ನೂ ಸಮಾವೇಶದಲ್ಲಿ ಪ್ರಸ್ತಾಪಿಸಲಾಯಿತು.
ಇದೇ ವೇಲೆ ಹಿಜಾಬ್ ಆದೇಶವನ್ನು ಅಧಿಕೃತವಾಗಿ ಹಿಂಪಡೆಯಬೇಕು, ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸಬೇಕು, ದ್ವೇಷ ಅಪರಾಧಗಳನ್ನು ತಡೆಯಬೇಕು, ಮೀಸಲಾತಿ ಮರುಸ್ಥಾಪಿಸಬೇಕು ಹಾಗೂ ಜಾತಿ ಸಮೀಕ್ಷೆ ವರದಿ ಜಾರಿಗೊಳಿಸಬೇಕು ಎಂಬ ಬೇಡಿಕೆಗಳನ್ನು ಸಂಘಟನೆಗಳು ಮುಂದಿಟ್ಟವು.
ಸಮಾವೇಶದ ಸಂಚಾಲಕ ಸುಹೈಲ್ ಮರೂರ್ ಮಾತನಾಡಿ, ಉರ್ದು, ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಪ್ರಕಟಿಸಿರುವ ವರದಿಯನ್ನು ಜಿಲ್ಲೆ ಹಾಗೂ ತಾಲೂಕು ಪ್ರತಿನಿಧಿಗಳಿಗೆ ಹಂಚಲಾಗುತ್ತದೆ. ಅವರು ಮುಖ್ಯಮಂತ್ರಿ ಹಾಗೂ ಶಾಸಕರ ಮೂಲಕ ಈ ಬೇಡಿಕೆಗಳನ್ನು ಮುಂದಿರಿಸಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮ ಯಾವುದೇ ಪಕ್ಷದ ವಿರುದ್ಧವೂ ಅಲ್ಲ, ಯಾವುದೇ ಮುಸ್ಲಿಂ ಸಚಿವ ಅಥವಾ ಶಾಸಕರ ಬೆಂಬಲಕ್ಕೂ ಅಲ್ಲ. ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಭವಿಷ್ಯದ ಬಗ್ಗೆ ಚರ್ಚಿಸುವುದೇ ಉದ್ದೇಶ” ಎಂದು ಹಾರಿಸ್ ಸಿದ್ದೀಖಿ ಹೇಳಿದರು.
ಬೀದರ್, ಕಲಬುರಗಿ, ಯಾದಗಿರಿ, ಹುಬ್ಬಳ್ಳಿ, ದಾವಣಗೆರೆ, ಮಂಡ್ಯ ಮತ್ತು ಹಾಸನ ಸೇರಿದಂತೆ ಹಲವು ಜಿಲ್ಲೆಗಳ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.