ಬೆಂಗಳೂರು: ಇ-ಫಾರ್ಮಸಿಗಳು, ಆನ್ಲೈನ್ ಔಷಧ ಮಾರಾಟ ಹಾಗೂ ಅತಿಯಾದ ರಿಯಾಯಿತಿ ವಿರೋಧಿಸಿ ಔಷಧ ವ್ಯಾಪಾರಿಗಳು ಮತ್ತು ಔಷಧ ವಿತರಕರು ಬುಧವಾರ ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದ್ದು, ರಾಷ್ಟ್ರವ್ಯಾಪಿ 24 ಗಂಟೆಗಳ ಬಂದ್ನಲ್ಲಿ ಭಾಗವಹಿಸಲಿದ್ದಾರೆ.
ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್(ಎಐಒಸಿಡಿ) ಪ್ರಕಾರ, ದೇಶಾದ್ಯಂತ 15 ಲಕ್ಷಕ್ಕೂ ಹೆಚ್ಚು ಔಷಧ ವ್ಯಾಪಾರಿಗಳು ಮತ್ತು ಔಷಧ ವಿತರಕರು, ಔಷಧಿಗಳ ಅಕ್ರಮ ಆನ್ಲೈನ್ ಮಾರಾಟ ಮತ್ತು ಕಾರ್ಪೊರೇಟ್ ಸಂಸ್ಥೆಗಳ "ವೃತ್ತಿಪರವಲ್ಲದ ಸ್ಪರ್ಧೆ"ಯನ್ನು ವಿರೋಧಿಸಿ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ನಾಳೆ ಔಷಧ ಅಂಗಡಿಗಳು ಬಂದ್ ಆಗಲಿದ್ದು, ಜನ ಅಗತ್ಯ ಔಷಧಿಗಳನ್ನು ಇಂದೇ ಖರೀದಿಸುವುದು ಉತ್ತಮ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಸಂಘ(ಕೆಸಿಡಿಎ)ದ ಅಧ್ಯಕ್ಷ ಆರ್. ರಘುನಾಥ ರೆಡ್ಡಿ, ಬೆಂಗಳೂರಿನ ಸುಮಾರು 6,500 ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಕರ್ನಾಟಕದಲ್ಲಿ ಸುಮಾರು 26,000 ಮೆಡಿಕಲ್ ಶಾಪ್ ಗಳು ಬಂದ್ ಆಗುವ ನಿರೀಕ್ಷೆಯಿದೆ ಎಂದು ಹೇಳಿದರು.
"ಇ-ಫಾರ್ಮಸಿಗಳ ಮೂಲಕ ಔಷಧಿ ಮಾರಾಟ ಮಾಡುವುದು ಕಾನೂನಿನಲ್ಲಿ ಅವಕಾಶ ಇಲ್ಲ. ನಮಗೆ ಹೈಕೋರ್ಟ್ ಆದೇಶಗಳೂ ಇವೆ, ಆದರೆ ಅವುಗಳನ್ನು ಪಾಲಿಸುತ್ತಿಲ್ಲ" ಎಂದು ರೆಡ್ಡಿ ಹೇಳಿದರು.
ಇ-ಫಾರ್ಮಸಿಗಳು, ರಿಯಾಯಿತಿಗಳನ್ನು ನೀಡುತ್ತಿವೆ. ಇವು ಶೇಕಡಾ 16-20 ರ ನಿಯಂತ್ರಿತ ಮಾರ್ಜಿನ್ ರಚನೆಗೆ ಅಡ್ಡಿಪಡಿಸುತ್ತಿವೆ ಮತ್ತು ಸಣ್ಣ ಚಿಲ್ಲರೆ ವ್ಯಾಪಾರಿಗಳನ್ನು ಕಡಿಮೆ ಮಾಡುತ್ತಿವೆ ಎಂದು ರೆಡ್ಡಿ ಆರೋಪಿಸಿದರು.