ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಏರ್ ಇಂಡಿಯಾ ವಿಮಾನದ ಹಿಂಭಾಗ ಲ್ಯಾಂಡಿಂಗ್ ವೇಳೆ ಏಕಾಏಕಿ ನೆಲಕ್ಕಪ್ಪಳಿಸಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
181 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಏರ್ ಇಂಡಿಯಾದ AI2651 ವಿಮಾನವು ಇಂದು ಬೆಳಗ್ಗೆ ಲ್ಯಾಂಡಿಂಗ್ ಮಾಡುತ್ತಿದ್ದ ವೇಳೆ ವಿಮಾನದ ಬಾಲ ರನ್ವೇಗೆ ಅಪ್ಪಳಿಸಿದೆ. ಬಳಿಕ ವಿಮಾನಯಾನ ಸಂಸ್ಥೆಯು, ವಿವರವಾದ ಪರಿಶೀಲನೆಗಾಗಿ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ.
"ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಬಾಲ ನೆಲಕ್ಕೆ ಡಿಕ್ಕಿ ಹೊಡೆದಿದೆ". ಆದರೂ ವಿಮಾನ ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಒಂದು ಮೂಲದ ಪ್ರಕಾರ, ವಿಮಾನವು ರನ್ವೇ ಸಮೀಪಿಸುತ್ತಿರುವಾಗ "ವೇಕ್ ಟರ್ಬ್ಯುಲೆನ್ಸ್" ಅನ್ನು ಎದುರಿಸಿತು. ನಂತರ ಪೈಲಟ್ ಅತ್ಯಂತ ಕುಶಲತೆಯಿಂದ ಲ್ಯಾಂಡಿಂಗ್ ಮಾಡಿದರು. ಈ ವೇಳೆ ಬಾಲ ನೆಲಕ್ಕೆ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ.