ಲಕ್ಷ್ಮಿ ಆನೆ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ Express Photo
ರಾಜ್ಯ

ಹಂಪಿಯಲ್ಲಿ ಉದ್ವಿಗ್ನ ಪರಿಸ್ಥಿತಿ: 'ಲಕ್ಷ್ಮಿ' ಆನೆ ಸ್ಥಳಾಂತರಕ್ಕೆ ಸ್ಥಳೀಯರಿಂದ ಭಾರೀ ವಿರೋಧ; ಭಾವನಾತ್ಮಕ ಪ್ರತಿಭಟನೆ

500ಕ್ಕೂ ಹೆಚ್ಚು ಸ್ಥಳೀಯರು ದೇವಾಲಯದ ಆವರಣದ ಬಳಿ ಜಮಾಯಿಸಿ ಅರಣ್ಯ ಇಲಾಖೆ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು.

ಹಂಪಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿ ಮಂಗಳವಾರ ಅರಣ್ಯ ಇಲಾಖೆಯು, ಪ್ರಸಿದ್ಧ ವಿರೂಪಾಕ್ಷ ದೇವಾಲಯಕ್ಕೆ ಸೇರಿದ 36 ವರ್ಷದ ಆನೆ ಲಕ್ಷ್ಮಿಯನ್ನು ಸ್ಥಳಾಂತರಿಸಲು ಕ್ರಮ ಕೈಗೊಂಡ ನಂತರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಇದು ಸ್ಥಳೀಯ ನಿವಾಸಿಗಳು, ಭಕ್ತರು ಮತ್ತು ಪ್ರವಾಸಿ ಮಾರ್ಗದರ್ಶಕರಿಂದ ಭಾವನಾತ್ಮಕ ಪ್ರತಿಭಟನೆಗೆ ಕಾರಣವಾಯಿತು.

500ಕ್ಕೂ ಹೆಚ್ಚು ಸ್ಥಳೀಯರು ದೇವಾಲಯದ ಆವರಣದ ಬಳಿ ಜಮಾಯಿಸಿ ಅರಣ್ಯ ಇಲಾಖೆ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ಹಲವು ವರ್ಷಗಳಿಂದ ಈ ಆನೆ ಹಂಪಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತಿನ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು. ಯಾವುದೇ ಸಂದರ್ಭದಲ್ಲೂ ಆನೆಯನ್ನು ಪಾರಂಪರಿಕ ಪಟ್ಟಣದಿಂದ ತೆಗೆದುಕೊಂಡು ಹೋಗಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅರಣ್ಯ ಅಧಿಕಾರಿಗಳು ಆನೆಯನ್ನು ಸಾಗಿಸಲು ಲಾರಿಯೊಂದಿಗೆ ಬಂದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಆಕ್ರೋಶಗೊಂಡ ಸ್ಥಳೀಯರು ಅಧಿಕಾರಿಗಳನ್ನು ತಡೆದ ಕಾರಣ ಪ್ರದೇಶದಲ್ಲಿ ಭಾರೀ ಪೊಲೀಸ್ ನಿಯೋಜನೆ ಮಾಡಲಾಯಿತು. ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಎಸ್ ಜಾಹ್ನವಿ ಮತ್ತು ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದರು.

ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಆನೆಯ ವಯಸ್ಸು, ಪುನರಾವರ್ತಿತ ಗಾಯಗಳು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಪರಿಗಣಿಸಿ ಲಕ್ಷ್ಮಿಯನ್ನು ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಶೇಷ ಆರೈಕೆ ಮತ್ತು ಮೇಲ್ವಿಚಾರಣೆಗಾಗಿ ಆನೆಯನ್ನು ಸ್ಥಳಾಂತರಿಸಲು ಅಧಿಕಾರಿಗಳು ಯೋಜಿಸಿದ್ದಾರೆ ಎಂದು ವರದಿಯಾಗಿದೆ.

ಆದಾಗ್ಯೂ, ಈ ಕ್ರಮವು ಆನೆಯ ಮಾವುತ ರಾಜಣ್ಣರಿಂದ ಭಾವನಾತ್ಮಕ ಪ್ರತಿಭಟನೆಗೆ ಕಾರಣವಾಯಿತು. ಲಕ್ಷ್ಮಿಯನ್ನು ಹಂಪಿಯಿಂದ ಬೇರ್ಪಡಿಸಬೇಡಿ ಎಂದು ರಾಜಣ್ಣ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟರು.

ಕೆಲವು ತಿಂಗಳ ಹಿಂದೆ ಹಂಪಿಗೆ ಭೇಟಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೇವಾಲಯದ ಆನೆ ಲಕ್ಷ್ಮಿ ಮಾಲೆ ಹಾಕಿದ ದೃಶ್ಯ.

ರಾಜ್ಯ ಪ್ರವಾಸಿ ಮಾರ್ಗದರ್ಶಿ ಸಂಘದ ಕಾರ್ಯದರ್ಶಿ ವಿರೂಪಾಕ್ಷಿ ವಿ ಹಂಪಿ, ಹಂಪಿಯ ಜನರು ಸಾಂಪ್ರದಾಯಿಕವಾಗಿ ವಿಶ್ವದ ಅತ್ಯಂತ ಶ್ರೀಮಂತ ಸಾಮ್ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಆನೆಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಏತನ್ಮಧ್ಯೆ, ಸಾಮಾಜಿಕ ಮಾಧ್ಯಮಗಳಲ್ಲಿ “ಹಂಪಿ ಲಕ್ಷ್ಮಿಯನ್ನು ಉಳಿಸಿ” ಪೋಸ್ಟರ್‌ಗಳ ಮೂಲಕ ಅಭಿಯಾನ ಆರಂಭಿಸಿದ್ದು, ಸ್ಥಳೀಯರು ಈ ಆನೆ ಹಂಪಿಯಲ್ಲಿಯೇ ಉಳಿಯಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

'ಯಾವ ಕ್ಷಣದಲ್ಲಾದರೂ ಕುಸಿಯಬಹುದು': Kerala Landslide ಕುರಿತು ಮೊದಲೇ ಎಚ್ಚರಿಕೆ ನೀಡಿದ್ದ ಗುತ್ತಿಗೆದಾರರ ವರದಿ

ಮುಂಬೈ ಮುಂಗಾರು ಅಬ್ಬರ: ಜಲಾವೃತ ರೈಲು ಹಳಿಗಳಲ್ಲಿ ಮೀನುಗಳ ಸ್ವಚ್ಛಂದ ಈಜಾಟ, Video Viral

ರಾಜ್ಯ ಸರ್ಕಾರಕ್ಕೆ ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡೋ ಅಧಿಕಾರವೇ ಇಲ್ಲ-ಛಲವಾದಿ ನಾರಾಯಣ ಸ್ವಾಮಿ ಕಿಡಿ!

SIR ಕಂಪ್ಯೂಟರೀಕರಣ, ಚಿಕ್ಕಬಳ್ಳಾಪುರ ಅಪರೂಪದ ಸಾಧನೆ, ರಾಜ್ಯದಲ್ಲೇ ಮೊದಲ ಸ್ಥಾನ!