ಕಲಬುರಗಿ: ರೌಡಿಶೀಟರ್ಗಳಿಗೆ ಗಡಿಪಾರು ಮಾಡುವುದಾಗಿ ಹೆದರಿಸಿ ಅವರಿಂದ ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಪೊಲೀಸ್ ಪೇದೆಗಳು ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಬ್ರಹ್ಮಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗಳಾದ ಪರಶುರಾಮ್ ಮತ್ತು ವೀರೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯ ಪೇದೆಗಳಾದ ವೀರೇಶ್, ಪರಶುರಾಮ್ ಇಬ್ಬರು ಸೇರಿಕೊಂಡು ರೌಡಿಶೀಟರ್ ಖನ್ನಾ ಪಟೇಲ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಕೇಳಿದಷ್ಟು ಹಣ ಕೊಡದಿದ್ದರೆ ಗಡಿಪಾರು ಮಾಡುವುದಾಗಿ ಹೆದರಿಸಿದ್ದಾರೆ.
ಖನ್ನಾ ಪಟೇಲ್ಗೆ ಗಡಿಪಾರಿನ ಬೆದರಿಕೆ ಹಾಕಿ ಮೊದಲಿಗೆ 50,000 ಲಂಚ ಪಡೆದಿದ್ದಾರೆ. ಅಷ್ಟು ಸಾಲದ್ದಕ್ಕೆ ಮತ್ತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಇತ್ತ ಲೋಕಾಯುಕ್ತ ಎಸ್ಪಿ ಸಿದ್ದರಾಜ್ ನೇತೃತ್ವದಲ್ಲಿ ಬಲೆಗೆ ಕೆಡವಲು ಸಿದ್ಧತೆ ನಡೆಸಿದ್ದಾರೆ.
ನಗರದ ಬ್ರಹ್ಮಪುರ ಪೊಲೀಸ್ ಠಾಣೆಯ ಹಿಂಬದಿಯಲ್ಲೇ ಕಾನ್ಸ್ಟೆಬಲ್ಗಳು ಲಂಚ ಪಡೆಯುತ್ತಿದ್ದಾಗ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕಾನ್ಸ್ಟೆಬಲ್ ಪರಶುರಾಮ್ ಸಿಕ್ಕಿ ಬಿದ್ದಿದ್ದು, ಮತ್ತೊಬ್ಬ ಕಾನ್ಸ್ಟೆಬಲ್ ವೀರೇಶ ಪರಾರಿಯಾಗಿದ್ದಾರೆ. ಇಲ್ಲಿನ ಬಾಪುನಗರದ ಮಾಂಗರವಾಡಿ ಗಲ್ಲಿಯ ಕಾರ್ತಿಕ್ ಪಾಟೀಲ ರೂಢಿಗತ ಕಳ್ಳನಾಗಿದ್ದು, ಆತನ ವಿರುದ್ಧ ಎಂಒಬಿ ಶೀಟ್ ಚಾಲ್ತಿಯಲ್ಲಿದೆ.
1 ಲಕ್ಷ ಕೊಡಬೇಕು. ಇಲ್ಲದಿದ್ದರೆ ಗಡೀಪಾರು ಮಾಡಲಾಗುವುದು ಎಂದು ಕಾರ್ತಿಕ್ ಕುಟುಂಬಕ್ಕೆ ಅಪರಾಧ ವಿಭಾಗದ ಈ ಕಾನ್ಸ್ಟೆಬಲ್ಗಳು ಹೆದರಿಸಿದ್ದರು. ಅದರಲ್ಲಿ ಮುಂಗಡವಾಗಿ ₹50 ಸಾವಿರ ಪಡೆದಿದ್ದರು. ಬಳಿಕ ಮತ್ತೆ 20 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಮೂಲಗಳು ಹೇಳಿವೆ.