ಮಂಗಳೂರು: ನೈತಿಕ ಪೊಲೀಸ್ಗಿರಿಯ ಆರೋಪಕ್ಕೆ ಸಂಬಂಧಿಸಿದಂತೆ, ವಿವಿಧ ಧರ್ಮಗಳಿಗೆ ಸೇರಿದ ಯುವಕ-ಯುವತಿಯರ ಗುಂಪಿಗೆ ಹೊಟೇಲ್ ನಲ್ಲಿ ಕೆಲವು ರೌಡಿ ಹಿನ್ನೆಲೆಯ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾದ ಪ್ರಕರಣದಲ್ಲಿ ದಕ್ಷಿಣ ಕನ್ನಡದ ಮೂಡುಬಿದಿರೆ ಪೊಲೀಸರು ಸ್ವಯಂಪ್ರೇರಿತವಾಗಿ (Suo Moto) ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರನ್ನು ಒಳಗೊಂಡ ಗುಂಪು ಹೊಟೇಲ್ ನಲ್ಲಿ ಕುಳಿತಿದ್ದ ವೇಳೆ ಆರೋಪಿಗಳು ಅಲ್ಲಿಗೆ ಬಂದು ಅವರನ್ನು ಪ್ರಶ್ನಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಯುವಕರು ಹೊಟೇಲ್ ನಿಂದ ಹೊರಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಬಳಿಕ ಪೊಲೀಸರು ಹೊಟೇಲ್ ಗೆ ತೆರಳಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿಗೆ ದೂರು ನೀಡುವಂತೆ ಸೂಚಿಸಿದ್ದರು. ಆದರೆ ಯುವತಿ ಹಾಗೂ ಆಕೆಯ ತಂದೆ ದೂರು ನೀಡಲು ನಿರಾಕರಿಸಿದರು. ಹೊಟೇಲ್ ಮಾಲೀಕರೂ ದೂರು ದಾಖಲಿಸಲು ನಿರಾಕರಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ತಿಳಿಸಿದ್ದಾರೆ.
ಬಳಿಕ ಪೊಲೀಸರು ಹೊಟೇಲ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡು, ಅದರಲ್ಲಿ ಕಂಡುಬಂದ ದೃಶ್ಯಗಳ ಆಧಾರದ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿಯಲ್ಲಿ ಯಾವುದೇ ಆಡಿಯೋ ಲಭ್ಯವಿಲ್ಲದ ಕಾರಣ, ದೃಶ್ಯಗಳಲ್ಲಿ ಕಂಡುಬಂದ ತಡೆದು ನಿಲ್ಲಿಸುವುದು ಹಾಗೂ ವಾಗ್ವಾದದ ಆಧಾರದ ಮೇಲೆ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯುವತಿಯ ತಂದೆ ಹಾಗೂ ಹೊಟೇಲ್ ಮಾಲೀಕರು ಹೆಚ್ಚಿನ ಜವಾಬ್ದಾರಿ ವಹಿಸಿ, ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದೆ ಬರಬೇಕಿತ್ತು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಆರೋಪಿಗಳನ್ನು ಈಗಾಗಲೇ ಮುಂಜಾಗ್ರತಾ ಕ್ರಮದಡಿ ಬಾಂಡ್ಗೆ ಒಳಪಡಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.