ಬೆಂಗಳೂರು: ಬಿಡದಿ ಸುತ್ತಮುತ್ತಲಿನ ಸುಮಾರು 7,800 ಎಕರೆಯನ್ನು ಬಿಡದಿ ಇಂಟಿಗ್ರೇಟೆಡ್ ಟೌನ್ಶಿಪ್ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಈ ವಿಚಾರವಾಗಿ, ಮೊದಲೇ ರಾಜ್ಯಸರ್ಕಾರದ ವಿರುದ್ದ ರೈತರು ಪ್ರತಿಭಟನೆಯ ರಣಕಹಳೆ ಮೊಳಸಾಗಿಸಿದ್ದಾರೆ. ಇದರ ನಡುವೆಯೇ, ಭೂಮಿ ನೀಡಿದ ರೈತರನ್ನು ವಂಚಿಸಲು ಯತ್ನಿಸಿದ ದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ.
ಹೌದು, ಬಿಡದಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದು ಪರಿಹಾರ ವಿತರಿಸುವ ಸಮಯದಲ್ಲೇ, ನಕಲಿ ದಾಖಲೆಗಳು ಮತ್ತು ನಕಲಿ ವಂಶವೃಕ್ಷಗಳನ್ನು ಸೃಷ್ಟಿಸಿ ಸುಮಾರು ₹5 ಕೋಟಿ ರೂಪಾಯಿ ಪರಿಹಾರ ಹಣವನ್ನು ದೋಚಲು ಯತ್ನಿಸಿದ ನಾಲ್ವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ. ಆ ಕುರಿತ ವರದಿ ಇಲ್ಲಿದೆ:
ವಂಚನೆ ನಡೆದಿದ್ದು ಹೇಗೆ?
ವಿಶೇಷ ಭೂಸ್ವಾಧೀನ ಅಧಿಕಾರಿ ಕಿಶನ್ ಕಲಾಲ್ ಅವರು ದಾಖಲೆಗಳನ್ನು ಪರಿಶೀಲಿಸಿದಾಗ, ಮೂಲ ಭೂಮಾಲೀಕರು ಮೃತಪಟ್ಟಿದ್ದರೂ, ಅವರ ಮಕ್ಕಳ ಅಥವಾ ಕಾನೂನುಬದ್ಧ ವಾರಸುದಾರರ ಹೆಸರಿಗೆ ಇನ್ನೂ ಪೌತಿ ಖಾತೆ ಆಗದ ಜಮೀನುಗಳನ್ನೇ ವಂಚಕರು ಗುರಿಯಾಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಅದರಂತೆ, ಆರೋಪಿಗಳು ಅರಳಾಳುಸಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸರ್ವೇ ನಂಬರ್ಗಳ ಜಮೀನಿಗೆ ಸಂಬಂಧಿಸಿದಂತೆ, ತಾವುಗಳೇ ಮೃತ ಮಾಲೀಕರ ಮಕ್ಕಳೆಂದು ಬಿಂಬಿಸಲು ಬಿಡದಿ ಉಪ ತಹಶೀಲ್ದಾರ್ ಮಂಜುನಾಥ್ ಅವರ ಡಿಜಿಟಲ್ ಸಹಿ ಇರುವ ನಕಲಿ ವಂಶವೃಕ್ಷ ಮತ್ತು ಒಪ್ಪಿಗೆ ಪತ್ರಗಳನ್ನು ಸೃಷ್ಟಿಸಿದ್ದರು. ಜೊತೆಗೆ, ಕಂಚುಗಾರನಹಳ್ಳಿ ಗ್ರಾಮ ಆಡಳಿತಾಧಿಕಾರಿ ಅವರ ನಕಲಿ ಸೀಲು ಹಾಗೂ ಸಹಿಗಳನ್ನು ಬಳಸಿ ವಂಚಕರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣ..
ಮೊದಲ ಪ್ರಕರಣದಲ್ಲಿ ಅರಳಾಳುಸಂದ್ರ ಗ್ರಾಮದ ಸರ್ವೆ ನಂಬರ್ 28/5 ರ 37 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಶಂಕರ್ ರೆಡ್ಡಿ ಮತ್ತು ಕೃಷ್ಣಾರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡನೇ ಪ್ರಕರಣದಲ್ಲಿ ಅದೇ ಗ್ರಾಮದ ಸರ್ವೆ ನಂಬರ್ 43/1 ರ 1 ಎಕರೆ 1 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಎಚ್. ವೆಂಕಟೇಶ್ ಮತ್ತು ಎಚ್. ರಾಜಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿದೆ.