ಚಿತ್ರದುರ್ಗ: ಬರದನಾಡು ಎಂದು ಹೇಳಲಾಗುವ ಕೋಟೆ ನಾಡು ಚಿತ್ರದುರ್ಗ ಪಾಲಿಗೆ ಐತಿಹಾಸಿಕ ಕ್ಷಣವೊಂದು ದಾಖಲಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯ ನೀರು ಇದೀಗ ಜಿಲ್ಲೆಯ ಗೊನೂರು ಕೆರೆ ತಲುಪಿದೆ.
ಹೌದು.. ಈ ಹಿಂದೆ ಭದ್ರಾ ಮೇಲ್ದಂಡೆ ಯೋಜನೆಯ ಜಿಲ್ಲಾ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ಹರಿಸಲಾಗಿದ್ದ ನೀರು ಕೊನೆಗೂ ಇಂದು ಚಿತ್ರದುರ್ಗ ಜಿಲ್ಲೆಯ ಗೊನೂರು ಕೆರೆ ತಲುಪಿದೆ.
ಚಿತ್ರದುರ್ಗ ಶಾಖಾ ಕಾಲುವೆಗೆ ಭದ್ರಾ ಜಲಾಶಯದಿಂದ ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಹರಿಸಲಾಗಿತ್ತು. ಇಂದು ಆ ನೀರು ಗೋನೂರು ಕೆರೆ ತಲುಬಿದೆ. ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನೂರಾರು ಸ್ಥಳೀಯರು ನೆರೆದಿದ್ದರು.
ಭದ್ರಾ ಜಲಾಶಯದಿಂದ ತರೀಕೆರೆ ಮಾರ್ಗವಾಗಿ ಅಜ್ಜಂಪುರ, ಕಡೂರು, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ ಜಿಲ್ಲೆ ಮೂಲಕ ಗೋನೂರು ಕೆರೆ ತಲುಪಿದೆ.
ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹರಿಬಿಡಲಾದ ನೀರು ಜಿಲ್ಲೆಯ ವಿವಿಧ ಭಾಗಗಳನ್ನು ದಾಟಿ ಗೊನೂರು ಕೆರೆ ಸೇರಿದೆ. ಇದರಿಂದ ಬರಪೀಡಿತ ಪ್ರದೇಶಗಳ ರೈತರು ಹಾಗೂ ನೀರಿನ ಸಮಸ್ಯೆ ಎದುರಿಸುತ್ತಿರುವ ಸಮುದಾಯಗಳಲ್ಲಿ ಹೊಸ ಆಶಾಭಾವನೆ ಮೂಡಿದೆ.
ಮೇಲ್ಭದ್ರಾ ಯೋಜನೆಯ ನೀರು ಗೊನೂರು ಕೆರೆ ತಲುಪಿರುವುದು ಚಿತ್ರದುರ್ಗ ಜಿಲ್ಲೆಯ ನೀರಾವರಿ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದರಿಂದ ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವುದರ ಜತೆಗೆ ಭವಿಷ್ಯದಲ್ಲಿ ನೀರಿನ ಭದ್ರತೆ ಹೆಚ್ಚುವ ನಿರೀಕ್ಷೆ ಇದೆ.
ಬರದಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರದುರ್ಗ ಜಿಲ್ಲೆಯ ಪಾಲಿಗೆ ಮೇಲ್ಭದ್ರಾ ನೀರಿನ ಈ ಪಯಣ ಮಹತ್ವದ ಬೆಳವಣಿಗೆಯಾಗಿದ್ದು, ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.