ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತನ್ನ ಸಹೋದ್ಯೋಗಿ ಆಗಿದ್ದು, ಅವರು ಏನು ತಪ್ಪು ಮಾಡಿಲ್ಲ, ಕಾನೂನು ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಅವರು ನನ್ನ ಸಹೋದ್ಯೋಗಿ. ಅವರು ಏನು ತಪ್ಪು ಮಾಡಿಲ್ಲ, ಕಾನೂನು ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದಾರೆ. ಹೊರಗಡೆ ಹೋಗಬಾರದು, ವ್ಯವಹಾರ ಮಾಡಬಾರದು ಅಂತ ಎಲ್ಲಿದೆ? ಇದೆಲ್ಲ ರಾಜಕಾರಣ ಎಂದರು.
ಇನ್ನೂ ಮೂರ್ನಾಲ್ಕು ಜನರ ಮೇಲೆ ದಾಳಿ ಮಾಡಬಹುದು. ಇಡೀ ಕಾಂಗ್ರೆಸ್ ಪಕ್ಷವನ್ನು ಟ್ರ್ಯಾಪ್ ಮಾಡೋದಕ್ಕೆ ತಯಾರಿ ಮಾಡ್ತಿದ್ದಾರೆ. ಬಿಜೆಪಿಯವರ ಮೇಲೆಲ್ಲೂ ಕೂಡ ದಾಳಿ ಮಾಡುತ್ತಿಲ್ಲ. ಸಮುದಾಯ ಮಾತ್ರ ಅಲ್ಲ. ಇಡೀ ಪಕ್ಷವನ್ನೇ ಟಾರ್ಗೆಟ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇದೇ ವೇಳೆ ವಂದೇ ಮಾತರಂ ಗೀತೆ ಮೊಟಕು ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ, ವಂದೇ ಮಾತರಂ ಬಗ್ಗೆ ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ಅವರು ರಾಜಕೀಯ ಮಾಡ್ತಿದ್ದಾರೆ ಅಷ್ಟೇ ಎಂದರು.
ಇನ್ನೂ ಕಾನೂನು ಬಾಹಿರ ಬಂದೂಕು ಶರಣಾಗತಿಗೆ ಸೂಚನೆ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ಕಾನೂನು ಬಾಹಿರವಾಗಿ ಯಾರಾದರೂ ಬಂದೂಕನ್ನು ಇಟ್ಟುಕೊಂಡಿದ್ದರೆ ಕೂಡಲೇ ಅದನ್ನ ಸರ್ಕಾರ ಒಪ್ಪಿಸಬೇಕು. ಸರೆಂಡರ್ ಮಾಡಲು ನವೆಂಬರ್ 1ನೇ ತಾರೀಖಿನವರೆಗೂ ಅವಕಾಶ ಕೊಡ್ತೀವಿ. ಪೊಲೀಸರು, ಅಧಿಕಾರಿಗಳು ಜನರ ಮನವೊಲಿಸಬೇಕು. ಅದರ ಜೊತೆ ಒಂದು ಕ್ಷಮೆಯಾಚನೆ ಬರೆದು ಕೊಟ್ರೆ ಸಾಕು ಎಂದು ತಿಳಿಸಿದ್ದಾರೆ. ಒಂದರ ನಂತರ ಸರೆಂಡರ್ ಮಾಡದಿದ್ದರೆ ಕ್ರಮ ಆಗುತ್ತದೆ. ರಕ್ಷಣೆಗಾಗಿ ಬಂದೂಕು ಬೇಕಿದ್ದರೆ ಅರ್ಜಿ ಹಾಕಲಿ ಎಂದರು.
ಕಸ್ತೂರಿರಂಗನ್ ವರದಿ ವಿಚಾರವಾಗಿ, ಮಂಗಳೂರು ಜಿಲ್ಲೆಗೆ ಭೇಟಿ ಕೊಟ್ಟ ಬಳಿಕ 3-4 ಜಿಲ್ಲೆಗಳಿಗೆ ಭೇಟಿಯನ್ನು ಕೊಡುತ್ತೇನೆ. ಅಲ್ಲಿ ಕಸ್ತೂರಿರಂಗನ್ ಸಂಬಂಧಪಟ್ಟ ಹಾಗೇ ರೈತರನ್ನು ಭೇಟಿ ಮಾಡುತ್ತೇನೆ. ನಾವು ರೈತರ ಸಮಸ್ಯೆ, ಬರದ ಸಮಸ್ಯೆ ಹಾಗೂ ಕಸ್ತೂರಿ ರಂಗನ್ ಸಮಸ್ಯೆ ಕುರಿತು ವಿಶೇಷ ಅಧಿವೇಶನ ಕರೆದಿದ್ದೇವೆ ಎಂದು ತಿಳಿಸಿದ್ದಾರೆ.