ಬೆಂಗಳೂರು: ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ. ಮಸೀದಿ ಮುಂದೆ ಪಟಾಕಿ ಸಿಡಿಸಿದ್ರೆ, ಗ್ರಹಚಾರ ಬಿಡಿಸ್ತೇನೆ ಎಂಬ ಮೈಸೂರು ಜಿಲ್ಲೆಯ ಟಿ ನರಸೀಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಧನಂಜಯ್ ಅವರ ಮಾತು ಈಗಾಗಲೇ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ಸ್ಪೆಕ್ಟರ್ ಧನಂಜಯ್ ಅವರ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಮಾಜಿ ಸಂಸದ ಪ್ರತಾಪ್, ಇನ್ನೊಂದು ಸಲ ಆ ರೀತಿ ಮಾತನಾಡಿದ್ರೆ ಠಾಣೆಗೆ ನುಗ್ಗುತ್ತೇನೆ. ಇನ್ಸ್ಪೆಕ್ಟರ್ ಅವರು ರೋಡ್ ಸೈಡ್ ತರ್ಲೆ ರೀತಿ ಮಾತನಾಡಿದ್ದಾರೆ. ಅದು ಸರಿಯಲ್ಲ ಎಂದು ಕಿಡಿಕಾರಿದ್ದರು.
ಈ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಇಮ್ರಾನ್ ಪಾಷಾ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವ ವೇಳೆ ಪಾಷಾ, ಮುಸ್ಲಿಮರ ಬಗ್ಗೆ ಏನಾದರೂ ಮಾತನಾಡಿದರೆ ಹುಷಾರ್. ಪ್ರತಾಪ್ ಸಿಂಹ ನೀನು ಮೊಟ್ಟೆ, ಚಪ್ಪಲಿಯಿಂದ ಸರಿಯಾಗಿ ಏಟು ತಿಂತೀಯಾ? ಎಂದಿದ್ದಾರೆ.
ಮುಂದುವರಿದು, ನಮ್ಮ ಮುಸ್ಲಿಂ ಹೆಣ್ಮಕ್ಕಳೇ ನಿನ್ನನ್ನ ಹೊಡೆದು ಸ್ಮಶಾನದೊಳಗೆ ಹಾಕುತ್ತಾರೆ. ನಿನ್ನಂತಹ ಸಾವಿರ ಜನ ಬಂದರು ನಮ್ಮ ಸಮುದಾಯದ ಒಂದು ಕೂದಲನ್ನು ಕಿತ್ತುಕೊಳ್ಳಲು ಆಗಲ್ಲ ಎಂದು ಟಿಪ್ಪು ಕಚೇರಿ ಉದ್ಘಾಟನೆ ಮಾಡಿದ ಬಳಿಕ ಹೇಳಿದ್ದಾರೆ.