ದೇಶ

ಮುಂದುವರಿದ ಜಿಎಸ್‍ಟಿ ಕಗ್ಗಂಟು: ಸೋಮವಾರ ನಡೆದ ಮಾತುಕತೆಯೂ ವಿಫಲ

Mainashree
ನವದೆಹಲಿ: ಮುಂದಿನ ವಿತ್ತೀಯ ವರ್ಷದಿಂದಲೇ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಜಾರಿಗೆ ತರುವ ಉಮೇದಿನಲ್ಲಿರುವ ಕೇಂದ್ರ, ಈ ಅಧಿವೇಶನದಲ್ಲಿಯೇ ಜಿಎಸ್ ಟಿ ಮಸೂದೆಗೆ ಅಂಕಿತ ಪಡೆಯುವ ಕೊನೆ ಪ್ರಯತ್ನವಾಗಿ ಕಾಂಗ್ರೆಸ್ ನಾಯಕರೊಂದಿಗೆ ಸೋಮವಾರ ಮಾತುಕತೆ ನಡೆಸಿದ್ದರೂ, ಫಲಪ್ರದವಾಗಿಲ್ಲ. 
ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ವೆಂಕಯ್ಯನಾಯ್ಡು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್, ಉಪ ನಾಯಕ ಆನಂದ್ ಶರ್ಮಾ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದರು. ಆದರೆ, ಉಭಯ ಪಕ್ಷಗಳ ನಾಯಕರ ನಡುವೆ ಸಹಮತ ಏರ್ಪಡದ ಹಿನ್ನೆಲೆಯಲ್ಲಿ ಮಾತುಕತೆ ಅಪೂರ್ಣಗೊಂಡಿತು. ಸಭೆ ನಂತರ ಮಾತನಾಡಿದ ವೆಂಕಯ್ಯನಾಯ್ಡು, ನಾವು ಮತ್ತೆ ಸಭೆ ಸೇರಿ ಸಮಾಲೋಚಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರಸಕ್ತ ಅಧಿವೇಶನದಲ್ಲಿಯೇ ಜಿಎಸ್‍ಟಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವ ಸಲುವಾಗಿ ಪ್ರಧಾನಿ ನರೇಂದ್ರಮೋದಿ ಅವರು ಕಾಂಗ್ರೆಸ್ ಅಧ್ಯಕ್ಷ ಸೋನಿಯಾಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಚಹಾಕೂಟಕ್ಕೆ ಕರೆದು ಮಾತುಕತೆ ನಡೆಸಿದರು. ಇದಕ್ಕೂ ಮುನ್ನ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಪುತ್ರಿ ವಿವಾಹದ ಆಮಂತ್ರಣ ಕೊಡುವ ನೆಪದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಹಿ ಸಹಕಾರ ಕೋರಿದ್ದರು. 
ಅಡ್ಡಿಯಾದ ಹೆರಾಲ್ಡ್ ಪ್ರಕರಣ: ಡಾ.ಅಂಬೇಡ್ಕರ್ ಜನ್ಮದಿನೋತ್ಸವದ ಅಂಗವಾಗಿ ಸಂಸತ್ತಿನಲ್ಲಿ ನಡೆದ ವಿಶೇಷ ಚರ್ಚೆಗೆ ಉತ್ತರಿಸಿದ್ದ ಪ್ರಧಾನಿ ಅವರು, ಪ್ರತಿಪಕ್ಷಗಳನ್ನು, ಮುಖ್ಯವಾಗಿ ಕಾಂಗ್ರೆಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡವರಂತೆ ಮಾತನಾಡಿದ್ದರು. 
ಆ ಹೊತ್ತಿಗೆ ಜಿಎಸ್ ಟಿ ದಾರಿ ಸುಗಮವಾಗಿದೆ ಎಂದೇ ಭಾವಿಸಲಾಗಿತ್ತು. ಆದರೆ, ಸುಬ್ರಮಣಿಯನ್ ಸ್ವಾಮಿ ದಾಖಲಿಸಿರುವ ಹೆರಾಲ್ಡ್ ಆಸ್ತಿ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್ ಅವರಿಬ್ಬರೂ ಖುದ್ದು ಹಾಜರಾಗಬೇಕು ಎಂದು ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ನಿಲುವು ಬದಲಿಸಿದೆ. 
ಆ ಪಕ್ಷದ ನಾಯಕರು, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೂ, ಜಿಎಸ್ ಟಿಗೂ ಸಂಬಂಧ ಇಲ್ಲ ಎಂದು ಹೇಳಉತ್ತಿದ್ದರೂ, ಆಡಳಿತ ಪಕ್ಷವು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿ, ಕಲಾಪಗಳಿಗೆ ಅಡ್ಡಿ ಮಾಡಿದೆ.
SCROLL FOR NEXT