ನವದೆಹಲಿ: ಮಹಾತ್ಮಾ ಗಾಂಧಿಯವರನ್ನು ಗುಂಡಿಕ್ಕಿ ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ನೇಣಿಗೇರಿಸಿದ ದಿನವನ್ನು ಬಲಿದಾನ ದಿನವಾಗಿ ಆಚರಿಸಲು ಹಿಂದೂ ಮಹಾಸಭಾ ತೀರ್ಮಾನಿಸಿರುವುದಾಗಿ ಬಲ್ಲಮೂಲಗಳು ವರದಿ ಮಾಡಿವೆ. ಹಿಂದೂ ಮಹಾಸಭಾ ಕಳೆದ ವರ್ಷ ಗೋಡ್ಸೆಯ ಹೆಸರಲ್ಲಿ ದೇವಸ್ಥಾನ ನಿರ್ಮಿಸುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಈಗ ಗೋಡ್ಸೆ ನೇಣಿಗೇರಿದ ದಿನವನ್ನು ಬಲಿದಾನ ದಿನವಾಗಿ ಆಚರಿಸಲು ಸಭೆ ಚಿಂತನೆ ನಡೆಸಿದೆ.
ಗೋಡ್ಸೆಯನ್ನು ನೇಣಿಗೇರಿಸಿದ ದಿನವಾದ ನವೆಂಬರ್ 15 ರಂದು ದೇಶಾದ್ಯಂತ 120 ಕೇಂದ್ರಗಳಲ್ಲಿ ಬಲಿದಾನ ದಿನವಾಗಿ ಆಚರಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಚಂದ್ರ ಪ್ರಕಾಶ್ ಕೌಶಿಕ್ ಆದೇಶಿಸಿದ್ದಾರೆ. 1949 ನವೆಂಬರ್ 15ರಂದು ಅಂಬಾಲಾ ಜೈಲಿನಲ್ಲಿ ಗೋಡ್ಸೆಯನ್ನು ನೇಣಿಗೇರಿಸಿದ್ದರು.
ರಾಜಸ್ಥಾನ, ಮಹಾರಾಷ್ಟ್ರ ಮೊದಲಾದೆಡೆ ಬಲಿದಾನ ದಿನವನ್ನಾಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬಂದಿದ್ದಾರೆ ಎಂದು ಕೌಶಿಕ್ ಹೇಳಿದ್ದಾರೆ. ಗಾಂಧಿಗಿಂತಲೂ ಹೆಚ್ಚು ದೇಶಪ್ರೇಮವಿದ್ದ ವ್ಯಕ್ತಿಯಾಗಿದ್ದರು ಗೋಡ್ಸೆ. ದೇಶದಲ್ಲಿನ ಬಹುತೇಕ ಮಂದಿಗೂ ಇದು ಗೊತ್ತಿದೆ. ಗೋಡ್ಸೆ ಗಾಂಧಿಯನ್ನು ಹತ್ಯೆ ಮಾಡಿದ್ದು ಯಾಕೆ ಎಂದು ಜನರು ಚಿಂತಿಸಲು ಈ ಬಲಿದಾನವ ಪ್ರೇರೇಪಿಸುತ್ತದೆ. ಪ್ರಸ್ತುತ ದಿನಾಚರಣೆ ಉತ್ತರ ಪ್ರದೇಶದಲ್ಲಿ ಆರಂಭವಾಗಲಿದೆ. ಈ ದಿನ ಪ್ರಯುಕ್ತ ಗೋಡ್ಸೆಯ ತ್ಯಾಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೌಶಿಕ್ ಹೇಳಿದ್ದಾರೆ.
ಅದೇ ವೇಳೆ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಹಾಗೂ ನಾಥೂರಾಮ್ ಗೋಡ್ಸೆಯ ಹಿರಿಯ ಸಹೋದರನೂ ಆದ ಗೋಪಾಲ್ ಗೋಡ್ಸೆ ಬರೆದ ಗಾಂಧಿವಧ್ ಕ್ಯೂಂ (ನಾನ್ಯಾಕೆ ಗಾಂಧಿಯನ್ನು ಕೊಂದೆ? ) ಎಂಬ ಕೃತಿಯನ್ನು ಜನರಿಗೆ ವಿತರಣೆ ಮಾಡಲು ಹಿಂದೂ ಸಭಾ ಯೋಚಿಸುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos