ನವದೆಹಲಿ: ಇಂದು ನಾನು ನನ್ನ 80ನೆ ವಯಸ್ಸಿನಲ್ಲಿ, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಾಣುವಾಗ ನನಗೆ ನಾಚಿಕೆಯಿಂದ ನನ್ನ ತಲೆ ತಗ್ಗಿಸಬೇಕೆಂದೆನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ನೌಕಾ ದಳದ ಮಾಜಿ ಮುಖ್ಯಸ್ಥ ರಾಮ್ ದಾಸ್ ಬರೆದಿರುವ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.
1990ರಿಂದ 1993ರ ವರೆಗೆ ರಾಮ್ ದಾಸ್ ಭಾರತೀಯ ನೌಕಾ ದಳದ ಮುಖ್ಯಸ್ಥರಾಗಿದ್ದರು ಮತ್ತು ತಮ್ಮ ಅಪ್ರತಿಮ ಸೇವೆ ಹಾಗೂ ಶಾಂತಿಗಾಗಿ ಅವರು ಮ್ಯಾಗ್ಸಸೆ ಪ್ರಶಸ್ತಿಯನ್ನೂ ಪಡೆದಿದ್ದರು. ಅಕ್ಟೋಬರ್ 22ರ ದಿನಾಂಕವನ್ನು ಹೊಂದಿರುವ ಈ ಬಹಿರಂಗ ಪತ್ರವನ್ನು ಅಡ್ಮಿರಲ್ ರಾಮ್ ದಾಸ್ ಇಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಅವರು ಬರೆದಿರುವ ಪತ್ರದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತರ ಮೇಲೆ ಇಷ್ಟೊಂದು ಹಲ್ಲೆಗಳು ನಡೆಯುತ್ತಿದೆ. ಆದರೆ, ಇದಕ್ಕೆ ಅಂತ್ಯವಾಡುವಲ್ಲಿ ಯಾರ ಪ್ರಯತ್ನಗಳು ಕಾಣದಂತಾಗಿದೆ. ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವಂತ ಹಲವಾರು ಸಂಸದರಿದ್ದಾರೆ, ಕ್ಯಾಬಿನೆಟ್ ಸಚಿವರೂ ಇದ್ದಾರೆ ಅಲ್ಲದೇ ಚುನಾಯಿತ ಮುಖ್ಯಮಂತ್ರಿಗಳೂ ಕೂಡ ಇದ್ದಾರೆ. ಆದರೆ ಅವರ ವಿರುದ್ಧ ಸರಿಯಾದ ಕ್ರಮಕೈಗೊಳ್ಳಲಾಗುತ್ತಿಲ್ಲ. ಇದರಿಂದಾಗಿ ನನಗೆ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ಎಂದು ಅವರು ಅವರು ಪತ್ರದಲ್ಲಿ ವಿಷಾಧ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದ ಮೇಲೆ ಜನ ಸಂಪೂರ್ಣ ಭರವಸೆ ಕಳೆದುಕೊಳ್ಳುವುದಕ್ಕೆ ಮೊದಲೇ ಸೂಕ್ತ ಕ್ರಮಗಳನ್ನು ಕೈಗೊಂಡು, ಬುಡದಿಂದಲೇ ಶುದ್ಧೀಕರಣ ಮಾಡುವುದಕ್ಕೆ ಹೆಜ್ಜೆಯಿಡಿ ಎಂದು ಅಡ್ಮಿರಲ್ ರಾಮ್ ದಾಸ್ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ಸಲಹೆ ನೀಡಿದ್ದಾರೆ.