ಹುರ್ರಿಯತ್ ಕಾನ್ಫರೆನ್ಸ್ ಬೆಂಬಲಿಗರು ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ಭಾರತ ಧ್ವಜದ ಪ್ರಾತಿನಿಧ್ಯವನ್ನು ದಹಿಸುತ್ತಿರುವುದು.
ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಬೀದಿ ಪ್ರತಿಭಟನೆಗಳಿಗೆ ಕೊನೆಹಾಡಲು ಗೂಂಡಾಗಿರಿ ಮಾಡುವವರು ಮತ್ತು ದುಷ್ಕರ್ಮಿಗಳ ವಿರುದ್ಧ ಭಾರೀ ಶಿಸ್ತುಕ್ರಮಕ್ಕೆ ಮುಂದಾಗಿರುವ ಪೊಲೀಸರು ಸುಮಾರು 500 ಮಂದಿ ಯುವಕರನ್ನು ಬಂಧಿಸಿದ್ದಾರೆ.
ಗೂಂಡಾಗಿರಿ ನಡೆಸುವ ಮತ್ತು ಬೇಕೆಂದೇ ತೊಂದರೆ ಕೊಡುವ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಪೊಲೀಸರು 349 ಆಪೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಕಾನೂನಿನ ನಿಷೇಧಾಜ್ಞೆ ನಿಬಂಧನೆಗಳ ಅಡಿಯಲ್ಲಿ 122 ಮಂದಿಯನ್ನು ಬಂಧಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಜುಲೈ 8ರಂದು ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆ, ಹಿಜ್ ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಕೊಂದದ್ದನ್ನು ಪ್ರತಿಭಟಿಸಿ ಕಾಶ್ಮೀರದ ಬೀದಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸುಮಾರು 6 ಸಾವಿರ ಮಂದಿ ಗಾಯಗೊಂಡಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಆರಂಭದಲ್ಲಿ ಕರ್ಫ್ಯೂ ವಿಧಿಸಲಾಯಿತು. ಆದರೆ ಆ ಕಾರ್ಯತಂತ್ರ ಫಲಿಸಲಿಲ್ಲ. ಇನ್ನಷ್ಟು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರಲ್ಲಿ ತೊಂದರೆ ನೀಡುವವರು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಜೀವಕ್ಕೆ ಹಾನಿಯುಂಟುಮಾಡುವವರನ್ನು ಪತ್ತೆಹಚ್ಚಲು ಪೊಲೀಸರು ಕ್ಯಾಮರಾ ಮೂಲಕ ವಿಡಿಯೋ ದೃಶ್ಯಾವಳಿಗಳನ್ನು ಮತ್ತು ಫೋಟೋವನ್ನು ಭದ್ರತಾ ಪಡೆ ಸಿಬ್ಬಂದಿ ಗಮನಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿ ಯೂನಿಫಾರ್ಮ್ ಧರಿಸಿ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮರಾ ಹಿಡಿದು ನಿಂತು ಪ್ರತಿಭಟನಾಕಾರರ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಮಾಡುತ್ತಾರೆ. ಕಲ್ಲೆಸೆಯುವುದು, ಸಾರ್ವಜನಿಕರಿಗೆ ತೊಂದರೆಯನ್ನುಂಟುಮಾಡುವವರನ್ನು ಬಂಧಿಸಿ ಈ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಯೋಜನೆ ಪೊಲೀಸರದ್ದು.
ಪ್ರತಿಭಟನೆಯಲ್ಲಿ ನಿರತರಾಗಿರುವ ಅನೇಕ ಯುವಕರು ಅವರ ಕುಟುಂಬದವರ ಜೊತೆ ವಾಸಿಸುತ್ತಿಲ್ಲವಂತೆ. ಅವರು ಪದೇ ಪದೇ ತಮ್ಮ ವಾಸಸ್ಥಾನವನ್ನು ಬದಲಾಯಿಸುತ್ತಿರುತ್ತಾರೆ, ಹಾಗಾಗಿ ಅವರನ್ನು ಹಿಡಿದು ಬಂಧಿಸುವುದು ಕಷ್ಟ ಎನ್ನುತ್ತಾರೆ ಪೊಲೀಸರು.
ಆದರೆ ಕಾನೂನು, ಸುವ್ಯವಸ್ಥೆ ಹೆಸರಿನಲ್ಲಿ ಶಾಂತಿಯುತ ಪ್ರತಿಭಟನಾಕಾರರಿಗೆ ಪೊಲೀಸರು ಹಿಂಸೆ ನೀಡುತ್ತಿದ್ದಾರೆ ಎಂಬುದು ಪ್ರತ್ಯೇಕತಾವಾದಿಗಳ ಆರೋಪ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos