ನವದೆಹಲಿ: ಕಾಂಗ್ರೆಸ್ ನಾಯಕರು ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ಅರುಣಾಚಲ ಪ್ರದೇಶ ರಾಜ್ಯಪಾಲ ಜೆಪಿ ರಾಜ್ಖೋವಾ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದ್ದಾರೆ.
ವಿಧಾನಸಭೆ ಅಧಿವೇಶನದ ದಿನಾಂಕವನ್ನು ಬದಲಿಸಿ ಮುಂಚಿತವಾಗಿ ನಡೆಸಲು ತೆಗೆದುಕೊಂಡಿದ್ದ ನಿರ್ಧಾರವನ್ನು ಸಮರ್ಥಿಸಿಕೊಂಡ ರಾಜ್ಯಪಾಲರು, ಬಹುಮತ ಸಾಬೀತು ಪಡಿಸದೇ, ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಮತ್ತು ಸ್ಪೀಕರ್ ತಂತ್ರ ಹೂಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರ ಪರ ಹಿರಿಯ ವಕೀಲ ಟಿಆರ್ ಅಂದ್ಯಾರುಜಿನ ಅವರು ಮಾತನಾಡಿ, ಮುಖ್ಯಮಂತ್ರಿ ನಬಂ ತೂಕಿ ರಾಜ್ಯಪಾಲರನ್ನು ಭೇಟಿ ಮಾಡಲು ಹೋದಾಗ ಅವರೊಂದಿಗೆ ಆಗಮಿಸಿದ್ದ ಕೆಲ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ನಿಂದಿಸಿದ್ದಾರೆ. ಅಲ್ಲದೇ, ಕೆಲ ಸಂಪುಟದ ಸದಸ್ಯರು ರಾಜ್ಯಪಾಲರ ಮೇಲೆ ದೈಹಿಕ ಹಲ್ಲೆ ಮಾಡಿ, ವಿಧಾನಸಭೆಗೆ ಬೀಗ ಹಾಕಿದ್ದಾರೆ. ಇದೆಂತಾ ಪ್ರಜಾಪ್ರಭುತ್ವ, ಒಬ್ಬ ರಾಜ್ಯಪಾಲನ ಮೇಲೆ ದೌರ್ಜನ್ಯ ಮಾಡುವುದು ಸರಿಯೇ? ಈ ರೀತಿ ಎಲ್ಲಿಯೂ ನಡೆಯಬಾರದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ತೂಕಿ ತಾಳಕ್ಕೆ ತಕ್ಕಂತೆ ಸ್ಪೀಕರ್ ಕುಣಿಯುತ್ತಿದ್ದರು. ಆದರೆ, ಇದು ಸರಿಬರುವುದಿಲ್ಲ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಈ ನಿರ್ಧಾರ ಕೈಗೊಳ್ಳಬೇಕಿತ್ತು. ಸವಿಂಧಾನದ ಪ್ರಕಾರವೇ ರಾಜ್ಯಪಾಲರು ಕ್ರಮ ಕೈಗೊಂಡಿದ್ದಾರೆ ಎಂದು ವಕೀಲರು ವಾದ ಮಂಡಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ನೀಡಿರುವ ವಿಶೇಷ ಅಧಿಕಾರವನ್ನು ರಾಜ್ಯಪಾಲರು ಚಲಾಯಿಸಬಾರದು. ರಾಜ್ಯಪಾಲರು ಸೀಮಿತ ಅಧಿಕಾರ ಮಾತ್ರ ಹೊಂದಿದ್ದಾರೆ ಎಂದು ಮೊನ್ನೆ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos