ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೇಲೆ ಮಸಿ ಬಳಿದಿರುವ ಘಟನೆ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂದು ದೆಹಲಿ ಉಪ ಮುಖ್ಯಂತ್ರಿ ಮನೀಶ್ ಸಿಸೋಡಿಯಾ ಅವರು ಆರೋಪ ವ್ಯಕ್ತಪಡಿಸಿದ್ದಾರೆ.
ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಮ-ಬೆಸ ನಿಯಮ ಯಶಸ್ಸು ಕಾಣಲು ಕಾರಣರಾದ ದೆಹಲಿ ಜನರಿಗೆ ಧನ್ಯವಾದ ಹೇಳುವ ಸಲುವಾಗಿ ಚತ್ರಸಾಲ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಭೆಯೊಂದನ್ನು ಏರ್ಪಡಿಸಿದ್ದರು. ಸಭೆಯನ್ನುದ್ದೇಶಿಸಿ ಕೇಜ್ರಿವಾಲ್ ಅವರು ಮಾತನಾಡಿದ್ದ ವೇಳೆ ಇದ್ದಕ್ಕಿದ್ದಂತೆ ಬಂದ ಮಹಿಳೆಯೊಬ್ಬಳು ಅವರ ಮೇಲೆ ಮಸಿ ಹಾಗೂ ಕೆಲವು ಪೇಪರ್ ಗಳನ್ನು ಎಸೆದು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಳು.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮನೀಶ್ ಸಿಸೋಡಿಯಾ ಅವರು, ಇದೊಂದು ಗಂಭೀರವಾದ ವಿಚಾರವಾಗಿದೆ. ಘಟನೆ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ. ಬಿಜೆಪಿಯವರು ದೆಹಲಿ ಪೊಲೀಸರ ಸಹಾಯದಿಂದ ಈ ಕೃತ್ಯವೆಸಗಿರುವುದಾಗಿ ಅನುಮಾನಗಳು ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭಗಳ ಪ್ರಯೋಜನ ಪಡೆಯಲು ಬಿಜೆಪಿ ಯಾವಾಗಲೂ ಬಯಸುತ್ತದೆ. ಕೇಜ್ರಿವಾಲ್ ಮತ್ತು ಇಡೀ ಸಂಪುಟದ ಮೇಲೆ ದಾಳಿ ನಡೆಸಲು ಬಿಜೆಪಿ ಬಯಸುತ್ತದೆ. ಸಮ-ಬೆಸ ನಿಯಮದ ಯಶಸ್ಸು ಹಾಗೂ ಜನರ ಬಳಿ ಆಮ್ ಆದ್ಮಿ ಪಕ್ಷ ಜನಪ್ರಿಯತೆ ಹೊಂದುತ್ತಿರುವುದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಬಿಜೆಪಿ ಜನರನ್ನು ಕೊಲ್ಲಲೂಬಹುದು ಎಂದು ಹೇಳಿದ್ದಾರೆ.
ಅಲ್ಲದೆ, ಘಟನೆ ಕುರಿತಂತೆ ದೆಹಲಿ ಪೊಲೀಸರ ವಿರುದ್ಧ ಹರಿಹಾಯ್ದಿರುವ ಅವರು, ಘಟನೆ ನಡೆಯುತ್ತಿದ್ದರೂ ದೆಹಲಿ ಪೊಲೀಸರು ವೀಕ್ಷಕರಂತೆ ನೋಡುತ್ತಲೇ ನಿಂತಿದ್ದರು. ಇದೊಂದು ದೆಹಲಿ ಪೊಲೀಸರ ಭದ್ರತಾ ವೈಫಲ್ಯ. ಒಂದು ವೇಳೆ ಇದು ಬಾಂಬ್ ಅಥವಾ ಆ್ಯಸಿಡ್ ದಾಳಿಯಾಗಿದ್ದರೆ ಇದರ ಪರಿಣಾಮ ಏನಾಗುತ್ತಿತ್ತು. ಕೇಜ್ರಿವಾಲ್ ಮೇಲೆ ದಾಳಿ ಆಗಲಿ ಎಂದು ಪೊಲೀಸರು ಎದುರು ನೋಡುತ್ತಿದ್ದರೇ? ಭದ್ರತೆ ಒದಗಿಸುವ ದೆಹಲಿ ಪೊಲೀಸರು ಎಲ್ಲಿ ಹೋಗಿದ್ದರು? ಸಾವಿರಾರು ಜನ ಸೇರುವ ಕಾರ್ಯಕ್ರಮದ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ. ಕಾರ್ಯಕ್ರಮದ ವೇಳೆ ಯಾವುದೇ ತಪಾಸಣೆ ನಡೆಸಿರಲಿಲ್ಲ. ಸಾರ್ವಜನಿಕರ ಭದ್ರತೆ ಬಗ್ಗೆ ಪೊಲೀಸರಿ ಕಾಳಜಿ ಇಲ್ಲ.
ಮಸಿ ಎರಚಿದ ನಂತರ ಯುವತಿ ಮಾಧ್ಯಮಗಳ ಬಳಿ ಮಾತನಾಡಲು ಸಾಧ್ಯ ಹೇಗೆ ಆಯಿತು. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದರೆ ಘಟನೆ ಹಿಂದೆ ಬಿಜೆಪಿ ನಾಯಕರ ಷಡ್ಯಂತರ ಇರುವುದು ಖಚಿತವಾಗುತ್ತದೆ ಎಂದು ಹೇಳಿದ್ದಾರೆ.