ನವದೆಹಲಿ: 14 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ಬಳಸಿಕೊಂಡರೆ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ಮತ್ತು ಗರಿಷ್ಠ 50 ಸಾವಿರದವರೆಗೆ ದಂಡ ವಿಧಿಸುವ ಹೊಸ ನಿಯಮ ಜಾರಿಗೆ ತಂದಿದ್ದು, ಇದಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದಾರೆ.
ಮಕ್ಕಳು ಶಾಲೆ ಮುಗಿದ ನಂತರ ಹಾಗೂ ರಜಾ ದಿನಗಳಲ್ಲಿ ತಮ್ಮ ಮನೆಗಳಲ್ಲಿ ಪೋಷಕರಿಗೆ ಮತ್ತು ಇತರರಿಗೆ ಕೆಲಸದಲ್ಲಿ ನೆರವು ನೀಡಬಹುದೆಂದು ಕಾನೂನಿನಲ್ಲಿ ಹೇಳಲಾಗಿದೆ.
ಹೊಸ ಶಾಸನದಲ್ಲಿ 14ರಿಂದ 18 ವರ್ಷದೊಳಗಿನ ಹದಿಹರೆಯದ ಮಕ್ಕಳು ಗಣಿಗಳಲ್ಲಿ ಮತ್ತು ಹೊತ್ತಿಕೊಳ್ಳುವ ವಸ್ತುವಿನ ಅಥವಾ ಸ್ಫೋಟಕಗಳಂತಹ ಅಪಾಯಕಾರಿ ವೃತ್ತಿಗಳಲ್ಲಿ ತೊಡಗಬಾರದೆಂದು ಕೂಡ ಹೇಳಿದೆ.
ಆದರೆ ಈ ಕಾನೂನು ಚಲನಚಿತ್ರ, ಜಾಹೀರಾತು ಹಾಗೂ ಟಿವಿ ಉದ್ಯಮಗಳಲ್ಲಿ, ದೃಶ್ಯ-ಶ್ರವ್ಯ ಮನರಂಜನಾ ಮಾಧ್ಯಮಗಳಲ್ಲಿ, ಸರ್ಕಸ್ ಹೊರತುಪಡಿಸಿ ಇತರ ಕ್ರೀಡಾ ಚಟುವಟಿಕೆಗಳಲ್ಲಿ ಕೆಲಸ ಮಾಡುವ ಮಕ್ಕಳಿಗೆ ಅನ್ವಯವಾಗುವುದಿಲ್ಲ. ಆದರೆ ಈ ಕ್ಷೇತ್ರದಲ್ಲಿ ಮಕ್ಕಳು ತೊಡಗಿದ್ದರೆ ಅವರ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂದು ಕೂಡ ಸೂಚಿಸಲಾಗಿದೆ.
ರಾಷ್ಟ್ರಪತಿಗಳು ಬಾಲ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016ಕ್ಕೆ ಒಪ್ಪಿಗೆ ಸೂಚಿಸಿದ್ದು, ಕಾನೂನನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಕಾನೂನು, ಬಾಲ ಕಾರ್ಮಿಕ(ತಿದ್ದುಪಡಿ ಮತ್ತು ನಿಯಂತ್ರಣ) ಕಾಯ್ದೆ 1986ಕ್ಕೆ ತಿದ್ದುಪಡಿ ತಂದಿದ್ದು, ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡವರಿಗೆ ಹೆಚ್ಚು ಶಿಕ್ಷೆ ನೀಡುತ್ತದೆ. ಮಕ್ಕಳನ್ನು ಎಲ್ಲಿಯಾದರೂ ಕಠಿಣ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆಯೇ ಎಂಬ ಬಗ್ಗೆ ಕಾಲಕಾಲಕ್ಕೆ ತಪಾಸಣೆ ನಡೆಸಲು ಸರ್ಕಾರಕ್ಕೆ ಈ ಕಾನೂನು ಅಧಿಕಾರ ನೀಡಿದೆ. ಅಲ್ಲದೆ ತಿದ್ದುಪಡಿ ಕಾಯ್ದೆಯಲ್ಲಿ ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆಯ ಪ್ರಮಾಣ ಹೆಚ್ಚು ಇರುತ್ತದೆ.
ಈ ಸಂಬಂಧ ಲೋಕಸಭೆಯಲ್ಲಿ ಜುಲೈ 26ರಂದು ಮಸೂದೆ ಅನುಮೋದನೆಗೊಂಡಿದ್ದು, ರಾಜ್ಯಸಭೆಯಲ್ಲಿ ಜುಲೈ 19ರಂದು ಅಂಗೀಕಾರಗೊಂಡಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos