ದೆಹಲಿಯಲ್ಲಿ ಇಂದು ನಡೆದ ಬಿಜೆಪಿ ಪಕ್ಷದ ಸಭೆ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಸಂಸತ್ ಕಲಾಪ ಆರಂಭಕ್ಕೂ ಮುನ್ನ ತಮ್ಮ ಪಕ್ಷದ ಸಂಸದರನ್ನು ಭೇಟಿ ಮಾಡಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. 500 ಮತ್ತು 1000 ಮುಖಬೆಲೆಯ ನೋಟುಗಳ ಹಿಂತೆಗೆತದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ತಿಂಗಳ ಆರಂಭದಲ್ಲಿ ತಾವು ತೆಗೆದುಕೊಂಡ ಆಘಾತಕಾರಿ ನಿರ್ಧಾರ ದೇಶದ ಬಡಜನರಿಗೆ ಸಹಾಯ ಮಾಡುವ ಉದ್ದೇಶದಿಂದಾಗಿತ್ತು. ಕಪ್ಪು ಹಣ, ಭ್ರಷ್ಟಾಚಾರ ಮತ್ತು ಅಕ್ರಮವಾಗಿ ಹಣದ ಸಾಗಾಟವನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಠಿಣ ನಿರ್ಧಾರ ತೆಗೆದುಕೊಂಡಿತು ಎಂದು ಹೇಳಿದ್ದಾರೆ.
ತಮ್ಮ ಪಕ್ಷದ ಸಂಸದರನ್ನುದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳು ತಪ್ಪು ಮಾಹಿತಿಗಳನ್ನು ಹರಡುತ್ತಿವೆ. ಸರ್ಕಾರದ ಈ ನಿರ್ಧಾರದಿಂದ ಜನತೆಗೆ ಆಗುವ ಲಾಭವೇನು ಎಂಬುದನ್ನು ತಿಳಿಸಬೇಕು ಎಂದು ಹೇಳಿದರು.
ಇತ್ತ ತಮ್ಮ ಪಕ್ಷದವರನ್ನುದ್ದೇಶಿಸಿ ಪ್ರಧಾನಿ ಮಾತನಾಡುತ್ತಿರುವಾಗ ಅತ್ತ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಾಯಕರು ನೋಟುಗಳ ನಿಷೇಧದ ಕುರಿತು ತಮ್ಮ ಮುಂದಿನ ತಮ್ಮ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು.
ಕಳೆದ ವಾರ ಚಳಿಗಾಲ ಅಧಿವೇಶನ ಆರಂಭವಾದಾಗಿನಿಂದ ಕರೆನ್ಸಿ ನಿಷೇಧ ಕುರಿತ ಗಲಾಟೆಯೇ ಅಧಿವೇಶನವನ್ನು ಕೊಂದುಹಾಕುತ್ತಿದೆ. ನೋಟುಗಳ ನಿಷೇಧದಿಂದ ಬಡವರಿಗೆ ಮತ್ತು ರೈತರಿಗೆ ಬಹಳ ತೊಂದರೆಯಾಗುತ್ತಿದ್ದು ಪ್ರಧಾನಿಗಳು ರಾಜ್ಯಸಭೆಯಲ್ಲಿ ಈ ಕುರಿತು ವಿವರಣೆ ನೀಡಬೇಕೆಂದು ಕೇಳಿದ್ದಾರೆ. ಲೋಕಸಭೆಯಲ್ಲಿ ಮತದ ನಂತರ ಚರ್ಚೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಪ್ರಧಾನಿಯವರು ರಾಜ್ಯಸಭೆಯಲ್ಲಿ ಮಾತನಾಡುವುದಿಲ್ಲ, ಹಣಕಾಸು ಸಚಿವ ಅರುಣ್ ಜೇಟ್ಲಿಯವರು ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದು ಸರ್ಕಾರ ಹೇಳಿದೆ. ಇದಕ್ಕೆ ಪ್ರತಿಪಕ್ಷಗಳು ಒಪ್ಪದಿರುವುದು ನೋಡಿದರೆ ವಿರೋಧ ಪಕ್ಷಗಳು ನಿಜವಾಗಿಯೂ ನೋಟು ನಿಷೇಧದ ಬಗ್ಗೆ ಚರ್ಚೆಸುವ ಇಚ್ಛೆ ಹೊಂದಿಲ್ಲ, ಕೇವಲ ಕಲಾಪಕ್ಕೆ ಅಡ್ಡಿಪಡಿಸುವುದು ಅವರ ಉದ್ದೇಶ ಎಂದು ಕಾಣುತ್ತದೆ ಎಂದು ಜೇಟ್ಲಿ ಹೇಳಿದ್ದರು.
ನಾಳೆ ಪ್ರತಿಪಕ್ಷಗಳು ಸಂಸತ್ ಭವನದ ಒಳಗೆ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ.