ಕಡಲೂರ್: ಪನ್ರುತಿಯ ಫೋರ್-ರೋಡ್ ಜಂಕ್ಷನ್ ಬಳಿಯ ಉದ್ಯಾನವೊಂದರಲ್ಲಿ ಐದು ಅಡಿ ಮಹಾತ್ಮ ಗಾಂಧಿ ವಿಗ್ರಹ ವರ್ಷಗಳಿಂದ ಉಪೇಕ್ಷೆಗೆ ಒಳಗಾಗಿತ್ತು. ಅಧಿಕಾರಶಾಹಿ ಇದರ ಮೇಲೆ ಯಾವುದೇ ಎಗ್ಗಿಲ್ಲದೆ ಹಲವಾರು ಬಾರಿ ಬಣ್ಣ ಬಳಿಸಿದ್ದರೆ, ಧೂಳು ಅದರ ಮೇಲೆ ಇಮ್ಮಡಿಯಾಗಿ ಕೂತಿತ್ತು. ಇತ್ತೀಚೆಗಷ್ಟೇ ನಗರಸಭಾ ಅಧಿಕಾರಿಗಳು ಈ ಪ್ರತಿಮೆಯ ಜಿರ್ಣೋದ್ಧಾರಕ್ಕಾಗಿ ಅದರ ಮೇಲೆ ಹಬ್ಬಿದ್ದ ಗಿಡಗುಂಟೆಗಳನ್ನು ಕತ್ತರಿಸಿ ಮತ್ತು ಬಣ್ಣ ಬಳಿಯಲು ನಿಶ್ಚಯಿಸಿದಾಗ, ಇದರ ಬೆಲೆ ಅವರಿಗೆ ತಿಳಿದಿರಲಿಲ್ಲ!
ಆರು ದಶಕಗಳ ಈ ಹಳೆಯ ಪ್ರತಿಮೆ ಪಂಚಲೋಹದಿಂದ ಮಾಡಿರುವುದು ಎಂದು ತಿಳಿದುಬಂದಿದೆ. ಐದು ಅತ್ಯಮೂಲ್ಯ ಲೋಹಗಳ ವಿಗ್ರಹ 25% ಚಿನ್ನದಿಂದ ಕೂಡಿದೆ ಮತ್ತು ಇದರ ತೂಕ 200 ಕೆಜಿ!
ಮೂಲಗಳ ಪ್ರಕಾರ ಆರು ದಶಕದ ಹಿಂದೆ ಈ ಪ್ರತಿಮೆಯನ್ನು ಉದ್ಯಾನವನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ನಂತರ ಉಪೇಕ್ಷೆಗೆ ಒಳಗಾಗಿದ್ದ ಈ ವಿಗ್ರಹದ ಮತ್ತು ಉದ್ಯಾನವನದ ಜೀರ್ಣೋದ್ಧಾರಕ್ಕೆ ಇತ್ತೀಚಿಗೆ ಪನ್ರುತಿ ಮುನ್ಸಿಪಲ್ ಅಧ್ಯಕ್ಷ ಪನ್ನೀರ್ ಸೆಲ್ವಂ 30 ಲಕ್ಷ ಘೋಷಿಸಿದ್ದರು.
ಗಾಂಧೀ ಜಯಂತಿ ಸನಿಹವಾಗುತ್ತಿರುವ ಹಿನ್ನಲೆಯಲ್ಲಿ 10 ದಿನಗಳ ಹಿಂದೆ ಈ ಪ್ರತಿಮೆಯ ಸ್ಥಳವನ್ನು ಕಂಡುಹಿಡಿದು, ಅದಕ್ಕೆ ಹೊಸದಾಗಿ ಬಣ್ಣ ಬಳಿಯಲು, ಹಳೆಯ ಬಣ್ಣವನ್ನು ಕೆರೆದು ತೆಗೆದಾಗ ಕಾರ್ಮಿಕರು ಹೊಳೆಯುವ ಪ್ರತಿಮೆಯನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ವಿಷಯ ತಿಳಿದ ಮುನ್ಸಿಪಲ್ ಅಧ್ಯಕ್ಷ, ಅಕ್ಕಸಾಲಿಗ ಎಸ್ ವಿ ವೈರಕಣ್ಣು ಅವರೊಂದಿಗೆ ಸ್ಥಳಕ್ಕೆ ಬಂದಾಗ ಇದು ಪಂಚಲೋಹದ ವಿಗ್ರಹ ಎಂದು ತಿಳಿದುಬಂದಿದೆ.
"ಈ ಪ್ರತಿಮೆಯ ತೂಕ 200 ಕೆಜಿ ಮತ್ತು ಇದರಲ್ಲಿ 25% ಚಿನ್ನ ಎಂದು ಅಂದಾಜಿಸಲಾಗಿದೆ ಅಂದರೆ ಸುಮಾರು 40 ಕೆಜಿ ಚಿನ್ನ ಹೊಂದಿದೆ ಮತ್ತು ಈ ಪ್ರತಿಮೆ ಕೋಟಿಗಟ್ಟಲೆ ಬೆಲೆಬಾಳುತ್ತದೆ" ಎಂದು ಮುನ್ಸಿಪಲ್ ಅಧಿಕಾರಿ ಹೇಳಿದ್ದಾರೆ.
ಈ ವಿಷಯ ಹರಡುತ್ತಿದ್ದಂತೆ ಈ ಪ್ರತಿಮೆ ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಯಿದ್ದಾರೆ. ಪ್ರತಿಮೆಯ ಬಳಿ ಭದ್ರತೆಯನ್ನು ಹೆಚ್ಚಿಸಿದ್ದು, ಸಿಸಿಟಿವಿ ಅಳವಡಿಸಲು ಪನ್ನೀರ್ ಸೆಲ್ವಂ ಮತ್ತು ಮುನ್ಸಿಪಲ್ ಕಮಿಷನರ್ ಪೆರುಮಾಳ್ ನಿರ್ಧರಿಸಿದ್ದಾರೆ.