ದೇಶ

ಹಿಂದೂ ನಾಯಕನ ಹತ್ಯೆ: ಕೊಯಮತ್ತೂರಿನಲ್ಲಿ ಕೋಮು ಹಿಂಸಾಚಾರ

Manjula VN

ಕೊಯಮತ್ತೂರು: ಅನಾಮಧೇಯ ವ್ಯಕ್ತಿಗಳ ಗುಂಪೊಂದು ಹಿಂದೂ ನಾಯಕರೊಬ್ಬನನ್ನು ಹತ್ಯೆ ಮಾಡಿದ್ದು, ಪರಿಣಾಮ ಕೊಯಮತ್ತೂರಿನಲ್ಲಿ ಕೋಮು ಹಿಂಸಾಚಾರ ಆರಂಭವಾಗುವಂತಾಗಿದೆ.

ಸುಬ್ರಮಣಿಯಮ್ ಪಾಳಯಂ ಮೂಲದ ಸಿ. ಶಶಿಕುಮಾರ್ ಎಂಬುವವರನ್ನು ಕಳೆದ ರಾತ್ರಿ ಅನಾಮಧೇಯ ವ್ಯಕ್ತಿಗಳ ಗುಂಪೊಂದು ಹತ್ಯೆ ಮಾಡಿತ್ತು. ಶಶಿಕುಮಾರ್ ಅವರು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಅವರ ಮೇಲೆ ದಾಳಿ ಮಾಡಿರುವ ನಾಲ್ಕು ಜನರ ಗುಂಪೊಂದು ಮಾರಾಣಾಂತಿಕವಾಗಿ ಹಲ್ಲೆ ನಡೆಸಿದೆ.

ದಾಳಿ ವೇಳೆ ದುಷ್ಕರ್ಮಿಗಳಿಂದ ಶಶಿಕುಮಾರ್ ಅವರು ತಪ್ಪಿಸಿಕೊಂಡು ಬಂದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಹತ್ಯೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದ್ದು,  ಸುಕ್ರವಾರ್ಪೇಟ್ ನಲ್ಲಿರುವ ಮಸೀದಿಯೊಂದರ ಮೇಲೆ ಪೆಟ್ರೋಲ್ ದಾಳಿ ನಡೆಸಲಾಗಿದೆ. ಅಲ್ಲದೆ, ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಕೆಲ ಪ್ರದೇಶಗಳಲ್ಲಿ ಬಸ್ ಸಂಚಾರ ಸೇವೆಯನ್ನು ಸ್ಥಗಿತಗೊಳಿಸಿವೆ. ಅಲ್ಲದೆ, ಕೊಯಮತ್ತೂರು ಮತ್ತು ತಿರುಪುರ್ ಜಿಲ್ಲೆಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗುತ್ತಿದೆ.

ಶಶಿಕುಮಾರ್ ಹತ್ಯೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಹಿಂದೂ ಮುನ್ನಾನಿಯ ರಾಜ್ಯಾಧ್ಯಕ್ಷ ಕಡೇಶ್ವರ ಜಿ ಸುಬ್ರಮಣಿ ಅವರು, ರಾಜ್ಯದಲ್ಲಿ ಹಿಂದೂ ಜನರ ಮೇಲೆ ದಾಳಿ ಮಾಡಲಾಗುತ್ತಿದ್ದು, ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಶುಕ್ರವಾರ ರಾಜ್ಯ ಬಂದ್ ಗೆ ಕರೆ ನೀಡಿದ್ದಾರೆ.

SCROLL FOR NEXT