ನವದೆಹಲಿ: ಸಜೀವ ಬುಲೆಟ್ ಗಳನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕನೊಬ್ಬನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋಲ್ಕತಾ ಮೂಲದ ಸುಧೀರ್ ಅಗರ್ವಾಲ್ ಬಂಧಿತ ವ್ಯಕ್ತಿಯೆಂದು ಹೇಳಲಾಗುತ್ತಿದೆ. ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ತಪಾಸಣೆ ನಡೆಸುತ್ತಿದ್ದ ವೇಳೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಗಳ ಕೈಗೆ ಬ್ಯಾಗ್ ವೊಂದು ದೊರಕಿದೆ. ಈ ವೇಳೆ ತಪಾಸಣೆ ನಡೆಸಿದಾದ ಬ್ಯಾಗ್ ನಲ್ಲಿ ಸಜೀವ ಬುಲೆಟ್ ಗಳು ದೊರಕಿದೆ ಎಂದು ತಿಳಿದುಬಂದಿದೆ.
ಬಂಧಿತ ಅಗರ್ವಾಲ್ ಅವರ ಬ್ಯಾಗ್ ನಿಂದ ಸಜೀವ ಬುಲೆಟ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೀಗ ವ್ಯಕ್ತಿಯನ್ನು ಪೊಲೀಸ ವಶಕ್ಕೆ ನೀಡಲಾಗಿದೆ. ತಪಾಸಣೆ ವೇಳೆ ಬುಲೆಟ್ ಗಳನ್ನು ಕೊಂಡೊಯ್ಯಿತ್ತಿರುವ ಕುರಿತು ಅಗರ್ವಾಲ್ ಸರಿಯಾದ ದಾಖಲೆಗಳನ್ನು ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಿಮಾನಗಳಲ್ಲಿ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.