ನವದೆಹಲಿ: ಜು.17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಸಂಸದರು, ಶಾಸಕರು ಸ್ವಂತ ಪೆನ್ ಬಳಕೆ ಮಾಡುವಂತಿಲ್ಲ, ಬದಲಾಗಿ ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿರುವ ಸಾಧನದಿಂದ ಗುರುತಿಸಬೇಕಾಗುತ್ತದೆ.
ಒಂದು ವೇಳೆ ಯಾವುದೇ ಶಾಸಕ/ ಸಂಸದ ಸ್ವಂತ ಪೆನ್ ನಿಂದಲೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಅಂತಹವರ ಮತದಾನ ಅಸಿಂಧುವಾಗಲಿದೆ ಎಂದು ಚುನಾವಣಾ ಆಯೋಗ ಜು.16 ರಂದು ಸ್ಪಷ್ಟಪಡಿಸಿದೆ. ಮೈಸೂರು ಪೇಂಟ್ಸ್ ನಿಂದ ಅಭಿವೃದ್ಧಿಪಡಿಸಲಾದ ನೇರಳೆ ಬಣ್ಣದ ಇಂಕ್(ಶಾಯಿ) ಹೊಂದಿರುವ ಸಾಧನದಿಂದಲೇ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗುತ್ತದೆ.
ಕಳೆದ ವರ್ಷ ಹರ್ಯಾಣದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಮತದಾನ ಮಾಡಿದ್ದ ಜನಪ್ರತಿನಿಧಿಗಳು ತಾವು ಬಳಸುವ ಪೆನ್ ನಿಂದ ಅಭ್ಯರ್ಥಿಗಳನ್ನು ಗುರುತಿಸಿದ್ದರು. ವಿಶೇಷ ಸಾಧನದ ಹೊರತಾಗಿಯೂ ತಮ್ಮ ಪೆನ್ ನಿಂದಲೇ ಶಾಸಕರು ಅಭ್ಯರ್ಥಿಗಳನ್ನು ಗುರುತಿಸಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ 12 ಶಾಸಕರ ಮತಗಳನ್ನು ಅಸಿಂಧುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಎಚ್ಚೆತ್ತುಕೊಂಡಿರುವ ಆಯೋಗ ಶಾಸಕರು ಸ್ವಂತ ಪೆನ್ ಬಳಕೆ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos