ನವದೆಹಲಿ: ರಾಜ್ಯಸಭೆಯಲ್ಲಿ ಅಪರೂಪಕ್ಕೊಮ್ಮೆ ಕಲಾಪಗಳಿಗೆ ಹಾಜರಾಗುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ನಟಿ ರೇಖಾ ವಿರುದ್ಧ ಸಮಾಜವಾದಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯಸಭೆಯಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ವಾಲ್, ಕಲಾಪಗಳಲ್ಲಿ ಭಾಗವಹಿಸಲು ಇಚ್ಛೆಯಿಲ್ಲವೆಂದಾದರೆ ಸಚಿನ್ ತೆಂಡೂಲ್ಕರ್ ಮತ್ತು ರೇಖಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದರಲ್ಲದೆ ಸದನದಿಂದ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ವಜಾಗೊಳಿಸಲು ಸಾಧ್ಯವಾದರೆ ರೇಖಾ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ವಜಾ ಮಾಡಲು ಏಕೆ ಸಾಧ್ಯವಾಗುವುದಿಲ್ಲ ಎಂದು ಕೇಳಿದರು.
ಈ ವಿಷಯವನ್ನು ಸದನದಲ್ಲಿ ಅವರು ಪ್ರಸ್ತಾಪಿಸುತ್ತಿರುವುದು ಇದೇ ಮೊದಲ ಸಲವೇನಲ್ಲ. ಕಳೆದ ಮಾರ್ಚ್ ನಲ್ಲಿ ರಾಜ್ಯ ಸಭೆಯಲ್ಲಿ ಮಾತನಾಡುತ್ತಾ ಅವರು, ನಾಮಾಂಕಿತ ರಾಜ್ಯಸಭಾ ಸದಸ್ಯರು ಕಲಾಪದ ವೇಳೆ ಹಾಜರಾಗಿರುವುದನ್ನು ನೋಡಲು ನಮಗೆ ಹಂಬಲವಿರುತ್ತದೆ. ಅವರು ಯಾವತ್ತೂ ಸದನಕ್ಕೆ ಬರುವುದಿಲ್ಲ, ಇಡೀ ಕಲಾಪ ಮುಗಿದರೂ ಕೂಡ ನಾವು ಅವರನ್ನು ನೋಡುವುದಿಲ್ಲ.
ಇದಕ್ಕೂ ಮುನ್ನ ಹಲವು ಬಾರಿ ಕಲಾಪಕ್ಕೆ ಸತತ ಗೈರುಹಾಜರಾಗುವುದಕ್ಕೆ ಸಚಿನ್ ಮತ್ತು ರೇಖಾ ಟೀಕೆ ಎದುರಿಸಿದ್ದರು.
ಇದಕ್ಕೂ ಮುನ್ನ ಇಂದು ಭಾರತೀಯ ಜನತಾ ಪಾರ್ಟಿಯ ಮುಖ್ಯಸ್ಥ ಅಮಿತ್ ಶಾ ಸಂಸತ್ ಕಲಾಪಕ್ಕೆ ಗೈರು ಹಾಜರಾಗುವ ಸಂಸದರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಬಿಜೆಪಿ ಸಂಸದೀಯ ಸಭೆ ನಂತರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಸಚಿವ ಅನಂತ್ ಕುಮಾರ್, ಪಕ್ಷ ವಿಪ್ ಜಾರಿ ಮಾಡಿದಾಗ ಅದನ್ನು ಸಂಸದರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. ಪಕ್ಷ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಪಕ್ಷದ ಸಂಸದರು ಇದನ್ನು ಪುನರಾವರ್ತಿಸಬಾರದು ಎಂದು ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos