ಬೀಜಿಂಗ್: ಗಡಿಯಲ್ಲಿ ಎದ್ದಿರುವ ವಿವಾದವನ್ನು ಬಗೆಹರಿಸಿಕೊಳ್ಳಲು ಅರ್ಥಪೂರ್ಣ ಚರ್ಚೆ ನಡೆಸುವುದಕ್ಕೆ ಮೊದಲು ಭಾರತ ಈಗ ನಿಯೋಜಿಸಿರುವ ಸೇನಾ ತುಕಡಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಪೂರ್ವಷರತ್ತನ್ನು ಚೈನಾ ವಿಧಿಸಿದೆ.
ಭಾರತ ಮತ್ತು ಚೈನಾ ಪಡೆಗಳ ನಡುವೆ ಎದ್ದಿರುವ ವಿವಾದಿಂದ ಸದ್ಯಕ್ಕೆ ಚೈನಾ ಕೈಲಾಶ್ ಮಾನಸಸರೋವರದ ತೀರ್ಥಯಾತ್ರೆಗೆ ತಡೆಹಾಕಿದೆ. ಬೀಜಿಂಗ್ ತನ್ನದು ಎಂದು ಕರೆದುಕೊಳ್ಳುವ ಡೊಂಗ್ಲೊಂಗ್ ಪ್ರದೇಶದಲ್ಲಿ ಎದ್ದಿರುವ ವಿವಾದ ಬಗೆಹರಿಸಿಕೊಳ್ಳುವವರೆಗೂ ತೀರ್ಥಯಾತ್ರೆಗೆ ಮತ್ತೆ ಅವಕಾಶ ನೀಡುವುದಿಲ್ಲ ಎಂದು ಚೈನಾ ಹೇಳಿದೆ.
"ಭಾರತ ತನ್ನ ಭಾಗಕ್ಕೆ ಸೇನಾ ತುಕಡಿಗಳನ್ನು ಹಿಂಪಡೆಯಬೇಕು ಎಂದು ನಾವು ಆಗ್ರಹಿಸುತ್ತೇವೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದ್ದಾರೆ.
"ಈ ಘಟನೆಯನ್ನು ಬಗೆಹರಿಸಿಕೊಳ್ಳಲು ಮತ್ತು ಅರ್ಥಪೂರ್ಣ ಚರ್ಚೆ ನಡೆಸಲು ಇದು ನಮ್ಮ ಪೂರ್ವ ಷರತ್ತು.
"ರಾಜತಾಂತ್ರಿಕವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮಾರ್ಗ ಇನ್ನು ತೆರೆದಿದೆ" ಎಂದು ಕೂಡ ಅವರು ಹೇಳಿದ್ದಾರೆ.
ಜೋಮ್ಪ್ಲರಿ ಮತ್ತು ಡೊಂಗ್ಲೊಂಗ್ ಕಡೆಯಿಂದ ಭೂತಾನ್ ಸೇನಾ ನೆಲೆಯೆಡೆಗೆ ಚೈನಾ ರಸ್ತೆ ನಿರ್ಮಿಸುತ್ತಿರುವುದಕ್ಕೆ ಭೂತಾನ್ ವಿರೋಧಿಸಿರುವುದನ್ನು ಕೂಡ ತಳ್ಳಿಹಾಕಿರುವ ಚೈನಾ, ಚೈನಾ ಭೂಪ್ರದೇಶದಲ್ಲಿ ಕಾನೂನುಬದ್ಧವಾಗಿ ಕಟ್ಟುತ್ತಿರುವ ರಸ್ತೆಯಿದು ಎಂದು ಸಮರ್ಥಿಸಿಕೊಂಡಿದೆ.
ಡೊಂಗ್ಲೊಂಗ್ ಮತ್ತು ದೋಕ್ಲಮ್ ಚೈನಾ ಮತ್ತು ಭೂತಾನ್ ನಡುವೆ ವಿವಾದಾತ್ಮಕ ಗಡಿ ಭೂಪ್ರದೇಶವಾಗಿದ್ದು, ಇಲ್ಲಿಯೇ ಚೈನಾದ ಪೀಪಲ್ಸ್ ಲಿಬರೇಶನ್ ಫ್ರಂಟ್ ಮತ್ತು ಭಾರತೀಯ ಸೇನೆ ಮುಖಾಮುಖಿಯಾಗಿದ್ದವು.
"ಪ್ರಾಚೀನ ಕಾಲದಿಂದಲೂ ಡೊಂಗ್ಲೊಂಗ್ ಚೈನಾ ಭೂಪ್ರದೇಶಕ್ಕೆ ಸೇರಿದೆ. ಇದರಲ್ಲಿ ಯಾವುದೇ ವಿವಾದ ಇಲ್ಲ ಮತ್ತು ಇದನ್ನು ಸಾಬಿತುಪಡಿಸಲು ನಮ್ಮಲ್ಲಿ ಅಧಿಕೃತ ಕಾನೂನು ದಾಖಲೆಗಳಿವೆ" ಎಂದು ಲು ಹೇಳಿದ್ದಾರೆ.
"ಮತ್ತು ಇದು ಚೈನಾ ಭೂಪ್ರದೇಶದಲ್ಲಿ ರಸ್ತೆ ನಿರ್ಮಿಸಲು ತೆಗೆದುಕೊಂಡಿರುವ ಸಾರ್ವಭೌಮ ನಿರ್ಧಾರ. ಇದು ಸಂಪೂರ್ಣ ಕಾನೂನುಬದ್ಧ ಮತ್ತು ಸಮರ್ಥನೀಯ" ಎಂದು ಕೂಡ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos