ದೇಶ

ರಾಷ್ಟ್ರೀಯತೆಗಲ್ಲ, ಇಸ್ಲಾಂಗಾಗಿ ಸೇನಾ ಪಡೆ ಮೇಲೆ ಕಲ್ಲು ತೂರಿ: ಝಾಕಿರ್ ಮುಸಾ

Manjula VN
ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಭಂಟ ಝಾಕಿರ್ ಮುಸಾ ಭಾರತೀಯ ಸೇನೆ ವಿರುದ್ಧ ಮತ್ತೆ ಯುವಕರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡಿದ್ದಾನೆ. 
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿರುವ ಝಾಕಿಸ್ ಮುಸಾ, ರಾಷ್ಟ್ರೀಯತೆಗೆ ಅಲ್ಲದೆ, ಇಸ್ಲಾಂಗಾಗಿ ಭಾರತೀಯ ಸೇನಾ ಪಡೆ ಮೇಲೆ ಕಲ್ಲು ತೂರಾಟ ನಡೆಸಿ ಎಂದು ಕರೆ ನೀಡಿದ್ದಾನೆ. 
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ವಿರುದ್ದ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿವೆ. ಪ್ರತಿಭಟನಾಕಾರರು ರಾಷ್ಟ್ರೀಯತೆಯ ಹೆಸರಿನಲ್ಲಿ ಕಲ್ಲು ತೂರಾಟ ನಡೆಸಬಾರದು, ಇಸ್ಲಾಂ ಹೆಸರಿನಲ್ಲಿ ಸೇನಾ ಪಡೆ ಮೇಲೆ ಕಲ್ಲು ತೂರಾಟ ನಡೆಸಬೇಕು. ಯುವ ಕಮಾಂಡರ್ ಗಳು ಪ್ರಜಾಪ್ರಭುತ್ವವೆಂಬ ಸಿದ್ಧಾಂತವನ್ನು ಬದಿಗೊತ್ತಿ, ಇಸ್ಲಾಂ ಎಂಬ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕಿದೆ. ರಾಷ್ಟ್ರೀಯತೆ ಹಾಗೂ ಪ್ರಜಾಪ್ರಭುತ್ವಕ್ಕೆ ಇಸ್ಲಾಂನಲ್ಲಿ ನಿಷಿದ್ಧವಿದೆ ಮುಸಾ ವಿಡಿಯೋದಲ್ಲಿ ಹೇಳಿದ್ದಾನೆ. 
ಇದಲ್ಲದೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಎಚ್ಚರಿಕೆ ನೀಡಿರುವ ಮುಸಾ, ಸೇನಾಪಡೆಗೆ ನೀಡುತ್ತಿರುವ ಬೆಂಬಲವನ್ನು ಕೂಡಲೇ ನಿಲ್ಲಿಸಿ. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ನಡೆಯುವ ಯುದ್ಧದ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾನೆ. 
ಕಳೆದ ವರ್ಷದ ಕೂಡ ಝಾಕಿರ್ ಮುಸಾ ಎರಡು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದ. ವಿಡಿಯೋ ಮೂಲಕ ಕಾಶ್ಮೀರ ಯುವಕರನ್ನು ಭಾರತೀಯ ಸೇನೆ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳನ್ನು ಮಾಡಿದ್ದ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಎಚ್ಚರಿಕೆಗಳನ್ನು ರವಾನಿಸಿದ್ದ. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಾನೆ. 
SCROLL FOR NEXT