ದೇಶ

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಆಯ್ಕೆ ಪ್ರಶ್ನಿಸಿದ್ದ ಶೆಹ್ಜಾದ್ ಪೂನವಾಲಾ ಪಕ್ಷದಿಂದ ಉಚ್ಛಾಟನೆ

Lingaraj Badiger
ನವದೆಹ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಧ್ಯಕ್ಷ ಪಟ್ಟಕಟ್ಟಲು ಪಕ್ಷದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ರಾಹಲ್ ಆಯ್ಕೆಯನ್ನು ಪ್ರಶ್ನಿಸಿದ್ದ ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿ ಶೆಹ್ಜಾದ್ ಪೂನವಾಲಾ ಅವರು ಗುರುವಾರ ಪಕ್ಷದಿಂದ ಉಚ್ಛಾಟಿಸಲಾಗಿದೆ.
"ರಾಜಕೀಯ ಅಂದ್ರೆ ಫ್ಯಾಮಿಲಿ ಬಿಸಿನೆಸ್ ಅಂದ್ಕೊಂಡ್ರಾ? ನನ್ನ ಜೊತೆ ಮುಕ್ತ ಚರ್ಚೆಗೆ ಬನ್ನಿ. ಕಾಂಗ್ರೆಸ್ ಪಕ್ಷದ ಭವಿಷಯಕ್ಕಾಗಿ ನಮ್ಮ ಯೋಜನೆ ಏನು ಎಂಬುದನ್ನು ಮುಕ್ತವಾಗಿ ಮಾತನಾಡೋಣ" ಎಂದು ಶೆಹ್ಜಾದ್ ಪೂನವಾಲಾ ಅವರು ರಾಹುಲ್ ಗಾಂಧಿಯವರಿಗೆ ನೇರ ಸವಾಲೆಸೆದಿದ್ದರು. ಇದರಿಂದ ತೀವ್ರ ಮುಜುಗರಕ್ಕಿಡಾಗಿದ್ದ ಕಾಂಗ್ರೆಸ್ ಹೈಕಮಾಂಡ್, ಶೆಹ್ಜಾಜ್ ಅವರನ್ನು ಇಂದು ಪಕ್ಷದಿಂದ ಉಚ್ಛಾಟಿಸಿದೆ.
ಡಿಸೆಂಬರ್ 4 ರಂದು ನಡೆಯಲಿರುವ ಎಐಸಿಸಿ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನೇ ಕಾಂಗ್ರೆಸ್ ಪಕ್ಷ ಅವಿರೋಧವಾಗಿ ಆಯ್ಕೆ ಮಾಡುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರನ್ನಾಗಿ ರಾಹುಲ್ ಗಾಂಧಿಯವರನ್ನು ಆರಿಸುತ್ತಿರುವ ಕಾಂಗ್ರೆಸ್ ನ ಕ್ರಮ ಹಲವು ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲದಿದ್ದರೂ, ಹೈಕಮಾಂಡ್ ವಿರುದ್ಧ ಸೆಡ್ಡುಹೊಡೆಯುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬಾಯಿಮುಚ್ಚಿಕೊಂಡು ಸುಮ್ಮನಿದ್ದಾರೆ. ಆದರೆ ಪೂನಾವಾಲಾ ಅವರು ಮಾತ್ರ ಬಹಿರಂಗವಾಗಿ ಇದನ್ನು ಖಂಡಿಸಿದ್ದಲ್ಲದೆ, ಈ ಹುದ್ದೆಗೆ ರಾಹುಲ್ ಅರ್ಹರೇ ಎಂಬ ಪ್ರಶ್ನೆಯನ್ನು ಪರೋಕ್ಷವಾಗಿ ಕೇಳಿ, ಪತ್ರವೊಂದನ್ನು ಬರೆದಿದ್ದರು.
SCROLL FOR NEXT