ರಾಯ್ ಪುರ: ದಕ್ಷಿಣ ಛತ್ತೀಸ್ ಗಢದ ದಂತೇವಾಡ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಯ ಸಿಬ್ಬಂದಿ 15 ಮಕ್ಕಳ ಮಣಿಕಟ್ಟು ಕತ್ತರಿಸಿರುವುದು ಕಂಡು ನಿಜಕ್ಕೂ ಗಾಬರಿಯಾದರು. ಅವರನ್ನು ವಿಚಾರಿಸಿದಾಗ ಬ್ಲೂವೇ ಲ್ ಗೇಮ್ ಆಡಿ ಮಣಿಕಟ್ಟು ಕತ್ತರಿಸಿಕೊಂಡದ್ದು ಎಂದು ತಿಳಿದುಬಂತು.
ವಿದ್ಯಾರ್ಥಿಗಳ ಶುಚಿತ್ವದ ಬಗ್ಗೆ ಶಾಲಾ ಸಿಬ್ಬಂದಿ ಎಂದಿನಂತೆ ಕೈ ಪರೀಕ್ಷಿಸುವಾಗ ಈ ವಿಚಾರ ಗಮನಕ್ಕೆ ಬಂದಿದೆ. ತಕ್ಷಣವೇ ಶಾಲಾ ಪ್ರಾಂಶುಪಾಲ ಎಲ್.ಬಿ.ಯಾದವ್ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
15 ಮಂದಿ ವಿದ್ಯಾರ್ಥಿಗಳ ಮಣಿಕಟ್ಟಿನಲ್ಲಿ ಗಾಯಗಳಾಗಿರುವುದನ್ನು ಪ್ರಾಂಶುಪಾಲರು ಗಮನಿಸಿದ್ದಾರೆ. ಅವರ ಪೋಷಕರಿಗೆ ಕೂಡ ಮಾಹಿತಿ ತಲುಪಿಸಲಾಗಿದೆ. ವಿದ್ಯಾರ್ಥಿಗಳನ್ನು ಕರೆದು ಅವರಿಗೆ ಬುದ್ದಿ ಹೇಳಲಾಗುವುದು. ವಿದ್ಯಾರ್ಥಿಗಳು ಬಳಸಿದ ಮೊಬೈಲ್ ಗಳನ್ನು ತಜ್ಞರು ತಪಾಸಣೆಗೊಳಪಡಿಸಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಡಿ.ಸಮಯ್ಯ ತಿಳಿಸಿದ್ದಾರೆ.
ವಿದ್ಯಾರ್ಥಿಗಳೆಲ್ಲ 9 ಮತ್ತು 10ನೇ ತರಗತಿಯವರಾಗಿದ್ದಾರೆ.