ಹೈದರಾಬಾದ್: ವೈದ್ಯಕೀಯ ಪರೀಕ್ಷೆಯಲ್ಲಿ ಸೀಟು ಪೆಡೆಯುವಲ್ಲಿ ವಿಫಲಳಾದ ಪತ್ನಿಯನ್ನು ಪತಿಯೇ ಸುಟ್ಟು ಹಾಕಿ ಕೊಂದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ರಂಗಾರೆಡ್ಡಿ ಮೂಲದವನಾದ ಋಷಿಕುಮಾರ್ ಎಂಬಾತನೇ ಈ ಕುಕೃತ್ಯವೆಸಗಿದ್ದು, ಋಷಿಕುಮಾರ್ ಹೈದರಾಬಾದ್ ನ ಎಲ್ ಬಿ ನಗರದ ರಾಕ್ ಟೌನ್ ನಗರದಲ್ಲಿ ವಾಸಿಸುತ್ತಿದ್ದ. ಇನ್ನು ಋಷಿಕುಮಾರ್ ದುಷ್ಕೃತ್ಯಕ್ಕೆ ಹಾರಿಕಾ ಎಂಬ ಮಹಿಳೆ ಬಲಿಯಾಗಿದ್ದು, ಪ್ರಸ್ತುತ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ತಾನೇ ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಾಕಿ ಬಳಿತ ತನ್ನ ಅತ್ತೆ ಮಾವಗೆ ಕರೆ ಮಾಡಿದ ಋಷಿಕುಮಾರ್ ನಿಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕರೆ ಮಾಡಿದ್ದಾನೆ.
ಕೂಡಲೇ ಸ್ಥಳಕ್ಕಾಗಮಿಸಿದ ಹಾರಿಕಾ ಪೋಷಕರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಅಲ್ಲದೆ ಅಳಿಯ ಋಷಿಕುಮಾರನೇ ಹಾರಿಕಾಳನ್ನು ಕೊಂದಿದ್ದಾನೆ ಎಂದು ದೂರು ನೀಡಿದ್ದಾರೆ. ಹಾರಿಕಾ ಪೋಷಕರು ಹೇಳುವಂತೆ “2 ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದರು. ಒಂದು ವರ್ಷದಿಂದ ಹಾರಿಕಾ ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರು. ಆದರೆ ಅವರಿಗೆ ಸೀಟು ಸಿಕ್ಕಿರಲಿಲ್ಲ. ಆಕೆಯ ಪತಿ ನಿರುದ್ಯೋಗಿಯಾಗಿದ್ದ. ಸೀಟು ಸಿಗದಿದ್ದಲ್ಲಿ ವಿಚ್ಛೇದನ ನೀಡುವುದಾಗಿಯೂ ಆತ ಬೆದರಿಸುತ್ತಿದ್ದ. ಈ ಬಗ್ಗೆ ಹಾರಿಕಾ ನಮಗೆ ತಿಳಿಸಿದ್ದರು. ಮೆಡಿಕಲ್ ಸೀಟು ಸಿಗದೇ ಇದ್ದುದರಿಂದ ಆತ ಹಾರಿಕಾಳನ್ನು ಕೊಂದಿದ್ದಾನೆ” ಎಂದು ಪೋಷಕರು ಆರೋಪಿಸಿದ್ದಾರೆ.
ಹಾರಿಕಾ ಹೈದರಾಬಾದ್ ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಕೋರ್ಸ್ ಮಾಡಲು ಇಚ್ಛಿಸಿದ್ದಳಂತೆ. ಇದೇ ಕಾರಣಕ್ಕೆ ಆಕೆ ವೈದ್ಯಕೀಯ ಪರೀಕ್ಷೆ ಕೂಡ ಬರೆದಿದ್ದಳು. ಆದರೆ ಪರೀಕ್ಷೆಯಲ್ಲಿ ಸೀಟು ದೊರೆಯದ ಕಾರಣ ಕುಪಿತಗೊಂಡ ಆಕೆಯ ಪತಿ ಋಷಿಕುಮಾರ್ ಅಕೆಯನ್ನು ಕೊಂದು ಹಾಕಿದ್ದಾನೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ವೇಣುಗೋಪಾಲ್ ರಾವ್ ಹೇಳಿದ್ದಾರೆ.
ಅಂತೆಯೇ ಪತಿ ಋಷಿಕುಮಾರ್ ವರದಕ್ಷಿಣೆ ನೀಡುವಂತೆ ಹಾರಿಕಾಗೆ ನಿತ್ಯವೂ ಪೀಡಿಸುತ್ತಿದ್ದ. ಖಾಸಗಿ ಕಂಪೆನಿಯೊಂದರಲ್ಲಿ ಇತ್ತೀಚೆಗಷ್ಟೇ ಆತ ಕೆಲಸ ಕಳೆದುಕೊಂಡಿದ್ದ. ಕೆಲಸ ಕಳೆದುಕೊಂಡಿದ್ದರಿಂದ ಆತ ಮಾನಸಿಕವಾಗಿ ಕುಗ್ಗಿಹೋಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos