ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಲಂಡನ್: 1984ರ ಸಿಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್ ಭಾಗಿಯಾಗಿರಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ.
ಲಂಟನ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, 3,000 ಸಿಕ್ಖರು ಹತ್ಯೆಗೀಡಾಗಿದ್ದ 1984ರ ಸಿಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್ ಭಾಗಿಯಾಗಿರಲಿಲ್ಲ. ಪ್ರಮುಖವಾಗಿ ರಾಜಧಾನಿ ದೆಹಲಿಯಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗಲೂ ಭಾಗಿಯಾಗಿರಲಿಲ್ಲ ಎಂದು ಹೇಳಿದ್ದಾರೆ.
ಸಿಖ್ ವಿರೋಧಿ ಗಲಭೆ ಕುರಿತಂತೆ ನನಗೆ ಯಾವುದೇ ರೀತಿಯ ಗೊಂದಲಗಳಿಲ್ಲ. ಗಲಭೆಯೊಂದು ದುರಂತ. ಅದು ನಿಜಕ್ಕೂ ಅತ್ಯಂತ ದುಃಖಕರವಾದ ಅನುಭವ. ಗಲಭೆಯಲ್ಲಿ ಕಾಂಗ್ರೆಸ್ ಭಾಗಿಯಾಗಿತ್ತು ಎಂದು ಹೇಳುತ್ತಾರೆ. ಇದನ್ನು ನಾನು ಒಪ್ಪುವುದಿಲ್ಲ, ಹಿಂಸಾಚಾರ ನಡೆದಾಗ ಅಲ್ಲಿ ದುರಂತವಿದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ಇದರಂತೆ ಲಂಡನ್ ನ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ನಡೆದ ಸಂವಾದದಲ್ಲೂ ಸಿಖ್ ವಿರೋಧಿ ಗಲಭೆ ಹಾಗೂ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮನಮೋಹನ್ ಸಿಂಗ್ ಅವರು ಮಾತನಾಡುವಾಗ ಎಲ್ಲರನ್ನೂ ಕುರಿತು ಮಾತನಾಡುತ್ತಾರೆ. ಈ ಹಿಂದೆ ನಾನು ಹೇಳಿದಂತೆಯೇ ಗಲಭೆಯಲ್ಲಿ ನಾನು ಬಲಿಪಶು. ಇದರ ಬಗ್ಗೆ ಹುಟ್ಟುವ ಭಾವನೆಗಳನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ.
ಹಿಂಸಾಚಾರ ಯಾವುದೇ ರೂಪದಲ್ಲಿದ್ದರೂ ಅದನ್ನು ನಾನು ವಿರೋಧಿಸುತ್ತೇನೆ. ಯಾರಿಗಾದರೂ ನೋವಾದರೆ, ನನಗೆ ಬಹಳ ನೋವಾಗುತ್ತದೆ. ಹಿಂಸಾಚಾರವನ್ನು ಶೇ.100ರಷ್ಟು ಖಂಡಿಸುತ್ತೇನೆ. ಹಿಂಸಾಚಾರದಲ್ಲಿ ಯಾರೇ ಭಾಗಿಯಾಗಿದ್ದರೂ, ಯಾವುದೇ ವ್ಯಕ್ತಿ ಭಾಗಿಯಾದರೂ ಅವರಿಗೆ ಶಿಕ್ಷೆಯಾಗಬೇಕು.
ಹಿಂಸಾಚಾರವನ್ನು ನೋಡದ ವ್ಯಕ್ತಿಗಳು, ಭಾಗಿಯಾಗದ ವ್ಯಕ್ದಿಗಳು ಸಿನಿಮಾಗಳಲ್ಲಿ ಇರುವ ರೀತಿಯಲ್ಲಿರುತ್ತದೆ ಎಂದು ತಿಳಿಯುತ್ತಿದ್ದಾರೆ. ಅದು ಹಾಗಿರುವುದಿಲ್ಲ. ಸಾಯುವ ಸಂದರ್ಭದಲ್ಲಿಯೂ ಪ್ರೀತಿಯಿಂದ ನೋಡುವ ವ್ಯಕ್ತಿಗಳನ್ನು ನಾನು ನೋಡಿದ್ದೇನೆ. ನನ್ನ ತಂದೆ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ವ್ಯಕ್ತಿ ಕೂಡ ಸಾವನ್ನಪ್ಪಿದ್ದನ್ನು ನಾನು ನೋಡಿದ್ದೇನೆ. ಜಫ್ನಾ ಬೀಚ್ ಬಳಿ ಪ್ರಭಾಕರನ್ ಸತ್ತು ಬಿದ್ದಿರುವುದನ್ನು ನೋಡಿದಾಗ, ನನಗೆ ಬಹಳ ಬೇಸರವಾಯಿತು. ಆತನ ಸ್ಥಾನದಲ್ಲಿ ನಾನು ನನ್ನ ತಂದೆಯನ್ನು ನೋಡಿದ್ದೆ. ಆತನ ಮಕ್ಕಳು ನನ್ನ ಸ್ಥಾನದಲ್ಲಿದ್ದರು.
ಹಿಂಸಾಚಾರದಲ್ಲಿ ನಿಮಗೆ ಪೆಟ್ಟು ಬಿದ್ದರೆ, ಅದನ್ನು ನೀವು ಸಂಪೂರ್ಣವಾಗಿ ಅರ್ಥ ಮಾಡಿಕೊಂಡರೆ, ಅದರಿಂದ ನಿಮ್ಮ ಮೇಲೆ ವಿಭಿನ್ನ ರೀತಿಯ ಪರಿಣಾಮ ಬೀರುತ್ತದೆ. ಹಿಂಸಾಚಾರದ ಬಗ್ಗೆ ಎಷ್ಟೋ ಮಂದಿಗೆ ತಿಳಿದೇ ಇರುವುದಿಲ್ಲ. ಹಿಂಸಾಚಾರ ಅತ್ಯಂತ ಭೀಕರವಾದದ್ದು ಎಂದು ತಿಳಿಸಿದ್ದಾರೆ.
1984ರಲ್ಲಿ ನಡೆದ ಸಿಕ್ಖ್ ವಿರೋಧಿ ಗಲಭೆಯಲ್ಲಿ 3,000 ಜನರು ಹತ್ಯೆಗೀಡಾಗಿದ್ದರು. ಪ್ರಕರಣದಲ್ಲಿ ಸಜ್ಜನ್ ಕುಮಾರ್ ಸೇರಿದಂತೆ ಹಲವಾರು ಕಾಂಗ್ರೆಸ್ ರಾಜಕೀಯ ನಾಯಕರ ಹೆಸರುಗಳು ಕೇಳಿ ಬಂದಿದ್ದವು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos