ದೇಶ

ಜಯಾ ವಿರುದ್ಧ ತಮಿಳುನಾಡು ಆರೋಗ್ಯ ಕಾರ್ಯದರ್ಶಿ ಸಂಚು: ತನಿಖಾ ಆಯೋಗ ಆರೋಪ

Lingaraj Badiger
ಚೆನ್ನೈ: ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ಅವರು ಅಪೊಲೊ ಆಸ್ಪತ್ರೆ ಜತೆ ಸೇರಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿಗೆ ಸಂಚು ರೂಪಿಸಿದ್ದರು ಎಂದು ತನಿಖಾ ಆಯೋಗದ ಪರ ವಕೀಲರು ಆರೋಪಿಸಿದ್ದಾರೆ.
ರಾಧಾಕೃಷ್ಣನ್ ಅವರು ಅಪೊಲೊ ಆಸ್ಪತ್ರೆ ಜತೆ ಸೇರಿಕೊಂಡು ಜಯಲಲಿತಾ ಅವರಿಗೆ ಅಸಮರ್ಪಕ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಆಯೋಗದ ಪರ ವಕೀಲ ಮೊಹಮ್ಮದ್ ಜಫರುಲ್ಲಾ ಖಾನ್ ಅವರು ದೂರಿದ್ದಾರೆ.
2016ರಲ್ಲಿ ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅಂದಿನ ಮುಖ್ಯ ಕಾರ್ಯದರ್ಶಿ ಪಿ ರಾಮ್ ಮೋಹನ್ ಅವರು ಉದ್ದೇಶಪೂರ್ವಕವಾಗಿ ಸುಳ್ಳು ದಾಖಲೆಗಳನ್ನು ನೀಡಿದ್ದಾರೆ ಎಂದು ಖಾನ್ ಆರೋಪಿಸಿದ್ದಾರೆ.
ಈ ಸಂಬಂಧ ಆಯೋಗಕ್ಕೆ ದೂರು ನೀಡಿರುವ ಖಾನ್ ಅವರು, ಈ ಇಬ್ಬರನ್ನು ತನಿಖೆಗೆ ಒಳಪಡಿಸಬೇಕು ಎಂದು ನ್ಯಾಯಮೂರ್ತಿ ಎ.ಆರ್ಮುಗಸ್ವಾಮಿ ನೇತೃತ್ವದ ತನಿಖಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಅಪೊಲೊ ಆಸ್ಪತ್ರೆ, ವಕೀಲರು ಮಾಡಿರುವ ಆರೋಪಗಳು ಆಧಾರ ರಹಿತ ಮತ್ತು ಸುಳ್ಳು ಸುದ್ದಿಗಳು ಎಂದು ಹೇಳಿದೆ. ಅಲ್ಲದೆ ರಾಧಾಕೃಷ್ಣನ್ ಅವರು ಸಹ ತಮ್ಮ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
SCROLL FOR NEXT