ಕೊಯಮತ್ತೂರು: ಕಾವೇರಿ ನದಿ ನೀರು ವಿವಾದ ಸಂಬಂಧ ಕೇಂದ್ರ ಸರ್ಕಾರ ಯಾವುದೇ ರಾಜ್ಯದ ಪರವಾಗಿಯೂ ಇಲ್ಲ ಎಂದು ಕೇಂದ್ರ ಸಚಿವ ಪುರುಷೋತ್ತಮ್ ರುಪಾಲಾ ಅವರು ಬುಧವಾರ ಹೇಳಿದ್ದಾರೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಕೇಂದ್ರ ಸರ್ಕಾರ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಈ ಹಿಂದೆ ಕೇಳಿ ಬಂದಿದ್ದವು.
ಈ ಹಿನ್ನಲೆಯಲ್ಲಿ ಆರೋಪಗಳನ್ನು ತಳ್ಳಿಹಾಕಿರುವ ರುಪಾಲಾ ಅವರು, ಕಾವೇರಿ ವಿವಾದ ಸಂಬಂಧ ಯಾವುದೇ ರಾಜ್ಯದ ಪರವಾಗಿಯೂ ಕೇಂದ್ರ ಸರ್ಕಾರವಿಲ್ಲ ಎಂದು ಹೇಳಿದ್ದಾರೆ.
ರೈತರಿಗೆ ಲಾಭವಾಗುವ ಕಡೆಗೆ ಕೇಂದ್ರ ಸರ್ಕಾರ ನಿಲ್ಲುತ್ತದೆ. ಕಾವೇರಿ ವಿಚಾರ ಅತ್ಯಂತ ಗಂಭೀರ ವಿಚಾರವಾಗಿದ್ದು, ಉಭಯ ರಾಜ್ಯಗಳ ನಾಯಕರನ್ನು ಕರೆದು ಮಾತುಕತೆ ನಡೆಸಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಮಾತುಕತೆ ನಡೆಸಿ ರೈತರ ಹಿತಾಸಕ್ತಿಗೆ ಸಂಬಂಧಿಸಿ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕಾವೇರಿ ವಿವಾದ ಸಂಬಂಧ ತಮಿಳುನಾಡು ರೈತರು ಕಳೆದ ವರ್ಷ ತಿಂಗಳಾನುಗಟ್ಟಲೆ ರಾಜಧಾನಿ ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ವಿಚಾರವನ್ನು ರಾಜಕೀಯ ಮಾಡಲಾಗುತ್ತಿದೆ. ರೈತರಿಗೆ ಲಾಭ ಮಾಡಲು ಭಾರತದ ಇತಿಹಾಸದಲ್ಲಿಯೇ ಮೋದಿ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಯೂರಿಯಾ, ರೈತರ ಆದಾಯ ದ್ವಿಗುಣಗೊಳಿಸುವುದು ಹೀಗೆ ನಾನಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. 25 ವರ್ಷಗಳಿಂದಲೂ ಜಾರಿಯಾಗದೆ ಸ್ಥಗಿತಗೊಂಡಿದ್ದ 99 ನೀರಾವರಿ ಯೋಜನೆಗೆ ರೂ.50,000 ಕೋಟಿಯನ್ನು ಸರ್ಕಾರ ಮೀಸಲಿಟ್ಟಿದೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos