ದೇಶ

ದೇಶದ್ರೋಹ ಪ್ರಕರಣ: ದೇಶದ ವಿರುದ್ಧ ಯುದ್ಧ ಸಾರಿದ್ದ ಆಸಿಯಾ ಎನ್‌ಐಎ ವಶಕ್ಕೆ!

Srinivasamurthy VN
ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶ ವಿರೋಧಿ ಭಾಷಣೆ ಮಾಡಿ ಕುಖ್ಯಾತಿ ಗಳಿಸಿದ್ದ ನಿಷೇಧಿತ ದುಕತರಾನ್-ಏ-ಮಿಲತ್‌ ಸಂಘಟನೆಯ ಮುಖ್ಯಸ್ಥೆ ಆಸಿಯಾ ಅಂದ್ರಾಬಿ ಶುಕ್ರವಾರ ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆಸಿಯಾ ಅಂದ್ರಾಬಿಯೊಂದಿಗೆ ಆಕೆಯ ಇಬ್ಬರು ಸಹವರ್ತಿಗಳಾದ ಸೋಫಿ ಫಹ್ಮಿದಾ ಹಾಗು ನಹಿದಾ ನಸ್ರಿನ್‌ರನ್ನು ಕೂಡ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಏಪ್ರಿಲ್‌ನಲ್ಲಿ ದೇಶದ ವಿರುದ್ಧ ಯುದ್ಧ ಸಾರಿದ್ದ ಆಸಿಯಾಳನ್ನು ಶ್ರೀನಗರ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಆಸಿಯಾ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಕಾಶ್ಮೀರ ಹೈಕೋರ್ಟ್ ಕಳೆದ ತಿಂಗಳು ವಜಾಗೊಳಿಸಿತ್ತು.
ಇದಕ್ಕೂ ಮೊದಲು ಕೇಂದ್ರ ಗೃಹಸಚಿವಾಲಯದ ಆದೇಶದ ಮೇರೆಗೆ ಅಂದ್ರಾಬಿ ಹಾಗೂ ಆಕೆಯ ಸಹವರ್ತಿಗಳ ಮೇಲೆ ವಿಧ್ವಂಸಕ ಕೃತ್ಯ(ತಡೆ) ಕಾಯಿದೆ 1967ರ ಅಡಿ ಪ್ರಕರಣ ದಾಖಲಿಸಲಾಗಿತ್ತು. 
ದ್ವೇಷ ಭಾಷಣಗಳನ್ನು ನೀಡುವ ಮೂಲಕ ಭಾರತದ ಐಕ್ಯತೆ, ಸಮಗ್ರತೆ ಹಾಗು ಸರ್ವಭೌಮತೆಯನ್ನು ಅಪಾಯಕ್ಕೆ ಸಿಲುಕಿಸುವ ಕೆಲಸವನ್ನು ಅಂದ್ರಾಬಿ ಮಾಡುತ್ತಿದ್ದಾರೆ. ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕೆಂದು ಬಹಿರಂಗವಾಗಿ ಹೇಳುವ ಆಸಿಯಾ, ದೇಶದ ವಿರುದ್ಧ ಹಿಂಸಾಚಾರ ನಡೆಸಲು ಜಿಹಾದ್‌ಗೆ ಕರೆ ನೀಡಿದ್ದಾಳೆ ಎಂದು ಆಕೆಯ ವಿರುದ್ಧದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈಕೆ ನಡೆಸುತ್ತಿರುವ ಸಂಘಟನೆ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ವಿವಿಧ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುಲಾಗುತ್ತಿದ್ದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಕಷ್ಟವಾಗುತ್ತಿದೆ ಈ ಹಿಂದೆ ಗೃಹ ಸಚಿವಾಲಯಕ್ಕೆ ಕೆಲ ದೂರುಗಳು ಬಂದಿದ್ದವು.
ಇನ್ನು ಭಯೋತ್ಪಾದಕ ನಾಯಕರೊಂದಿಗೆ ಆಸಿಯಾ ಅಂದ್ರಾಬಿ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿದ್ದ ವಿಚಾರವು ಪೊಲೀಸ್ ತನಿಖೆಯಿಂದ ಹೊರಬಂದಿದೆ.
SCROLL FOR NEXT