ನವದೆಹಲಿ: ಸಾಮೂಹಿಕ ಹಲ್ಲೆಯಂತಹ ಘಟನೆಗಳು ನಿಲ್ಲಬೇಕಿದ್ದರೆ, ಜನರು ಗೋಮಾಂಸ ಸೇವನೆಯನ್ನು ನಿಲ್ಲಿಸಬೇಕೆಂದು ಹೇಳಿದ್ದ ಆರ್'ಎಸ್ಎಸ್ ನಾಯಕನ ಹೇಳಿಕೆಗೆ ಶಿಯಾ ವಕ್ಫ್ ಮಂಡಳಿ ಮಂಗಳವಾರ ಬೆಂಬಲ ನೀಡಿದೆ.
ಆರ್'ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸೀಮ್ ರಿಜ್ವಿಯವರು, ಗೋಮಾಂಸ ಸೇವನೆ ಇಸ್ಲಾಂನಲ್ಲಿ ಪಾಪದ ಕರ್ಮವಾಗಿದ್ದು, ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಬೇಕೆಂದು ಹೇಳಿದ್ದಾರೆ.
ಇಂದ್ರೇಶ್ ಕುಮಾರ್ ಅವರ ಹೇಳಿಕೆಯಲ್ಲೂ ಒಂದು ಅಂಶವಿದೆ. ಧಾರ್ಮಿಕ ಭಾವನೆಗಳಿಗೆ ನೋವು ಮಾಡುವ ಕೆಲಸವನ್ನು ಯಾರೂ ಮಾಡಬಾರದು. ಗೋ ಹತ್ಯೆಗೆ ಕಾನೂನು ರೂಪಿಸಿದ್ದೇ ಆದರೆ, ಸಾಮೂಹಿಕ ಹಲ್ಲೆ ಪ್ರಕರಣಗಳು ನಿಲ್ಲುತ್ತವೆ. ಒಂದು ಸಮುದಾಯದ ಗೋವುಗಳಿಗೆ ತಾಯಿಯ ಸ್ಥಾನಮಾನವನ್ನು ನೀಡಿದ್ದು, ಅಂತಹ ಗೋವನ್ನು ಹತ್ಯೆ ಮಾಡಬಾರದು ಎಂದು ಹೇಳಿದ್ದಾರೆ.
ಮುಸ್ಲಿಮರು ಗೋವು ಹತ್ಯೆ ಮಾಡುವುದು ಮತ್ತು ಗೋಮಾಂಸ ಸೇವನೆ ಮಾಡುವುದನ್ನು ನಿಲ್ಲಿಸಬೇಕು. ಗೋಮಾಂಸ ಸೇವನೆ ಇಸ್ಲಾಂ ಧರ್ಮದಲ್ಲಿ ಪಾಪವೆಂದು ಹೇಳಲಾಗುತ್ತದೆ. ಸಾಮೂಹಿಕ ಹಲ್ಲೆ ಪ್ರಕರಣಗಳನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಪ್ರತೀ ಪ್ರದೇಶದಲ್ಲಿಯೂ ಭದ್ರತೆ ನೀಡಲೂ ಸಾಧ್ಯವಿಲ್ಲ. ಗೋವುಗಳ ಹತ್ಯೆಗೆ ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತರಬೇಕಿದೆ ಎಂದು ತಿಳಿಸಿದ್ದಾರೆ.