ನವದೆಹಲಿ: ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಯಮುನಾ ನದಿ ಅಪಾಯ ಮಟ್ಟಮೀರಿ ಹರಿಯುತ್ತಿರುವ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ ಎಂದು ಶನಿವಾರ ತಿಳಿದುಬಂದಿದೆ.
ಹರಿಯಾಣದ ಹಾತ್ನಿಕುಂಡ್ ನಿಂದ ನೀರನ್ನು ಬಿಡುಗಡೆ ಮಾಡಿರುವುದು ಹಾಗೂ ಭಾರೀ ಮಳೆ ಎರಡೂ ಯುಮುನಾ ನದಿ ಅಪಾಟಮಟ್ಟ ಮೀರಿ ಹರಿಯಲು ಕಾರಣವಾಗಿದೆ.
ಯುಮುನಾದಿ ಅಪಾಟ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜನರಿಗೆ ಮುನ್ನೆಚ್ಚರಿಕೆಗಳನ್ನು ನೀಡಿರುವ ಅಧಿಕಾರಿಗಳು, ತಗ್ಗು ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕೆಲಸಗಳನ್ನು ಮಾಡುತ್ತಿದ್ದಾರೆ.
ದೆಹಲಿಯ ಯುಮುನಾ ನದಿಯ ಮಟ್ಟ 204.83ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆ ಸುಮಾರಿದೆ ನದಿಯ ನೀರಿನ ಮಟ್ಟ 205.06 ಮೀಟರ್'ಕ್ಕೆ ಏರಿಕೆಯಾಗಿದೆ. ಮತ್ತಷ್ಟು ಸಮಯದಲ್ಲಿ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು. ಆದರೆ, ಪ್ರಸ್ತುತ ಯಾವುದೇ ರೀತಿಯ ಅಪಾಯಗಳಿಲ್ಲ ಎಂದು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ ತಿಳಿಸಿದೆ.
ಇಂದು ಬೆಳಿಗ್ಗೆ ಹರಿಯಾಣ ಸರ್ಕಾರ ಯುಮುನೆಗೆ 2,11,874 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿತ್ತು. ಈ ನೀರನ್ನು ದೆಹಲಿ ಜನತೆಯು ಕುಡಿಯುವ ನೀರಾಗಿ ಬಳಕೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೀರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿ ಅಪಾಯಮಟ್ಟದಲ್ಲಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರ ಮಾಡಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.
ಉತ್ತರಪ್ರದೇಶದಲ್ಲಿ ಭಾರೀ ಮಳೆ; 49 ಜನರ ಸಾವು
ಉತ್ತರಪ್ರದೇಶದಲ್ಲಿ ಹಲವು ದಿನಗಳಿಂದಲೂ ಎಡೆಬಿಡದೆ ಮಳೆಯಾಗುತ್ತಿದ್ದು, ಮಳೆಯಿಂದ ಸಂಭವಿಸಿದ ದುರಂತಗಳಲ್ಲಿ ಕಳೆದೆರಡು ದಿನಗಳಲ್ಲಿ ಒಟ್ಟು 49 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಸಹರಾನ್ಪುರ ಒಂದರಲ್ಲೇ 11 ಮಂದಿ ಸಾವನ್ನಪ್ಪಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಸಂಭವಿಸಿದ ಅವಘಡಗಳಲ್ಲಿ ಒಟ್ಟು 49 ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ರಾದಲ್ಲಿ 6, ಮುಜಾಫರ್ ನಗರ ಮತ್ತು ಕಾಸ್ಗಂಜ್ 6, ಮೀರುತ್ ಮತ್ತು ಮೈನ್ಪುರದಲ್ಲಿ ತಲಾ 8, ಬರೇಲಿಯಲ್ಲಿ 2, ಖಾಲ್ಪುರ ಗ್ರಾಮಾಂತರ ಪ್ರದೇಶ 1, ಮಥುರಾ 1, ಘಾಜಿಯಾಬಾದ್ 1, ಹಪುರ್ 1 , ರಯೀ ಬರೇಲಿ 1, ಜಲೌನ್ 1, ಜೌನ್ ಪುರ 1, ಪ್ರತಾಗರ್ಹ್ 1, ಬುಲಂದರ್ ಶೆಹರ್ 1, ಫಿರೋಜಾಬಾದ್ 1 ಮತ್ತು ಅಮೇಥಿಯಲ್ಲಿ 1 ಹಾಗೂ ವಿವಿಧೆಡೆ ಒಟ್ಟು 49 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.