ಪಾಟ್ನಾ: ಬಿಹಾರದ ಪೂರ್ವ ಕಟಿಹಾರ್ ಜಿಲ್ಲೆಯಲ್ಲಿ ದಂಪತಿ ಹಾಗೂ ಇಬ್ಬರ ಮಕ್ಕಳು ಮಲಗಿದ್ದ ದಲಿತರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಇಬ್ಬರು ಮಕ್ಕಳು ಸಜೀವ ದಹನವಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಪೋಷಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಒಂದ ತುಣುಕು ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ಬಡ ದಲಿತ ಕುಟುಂಬ ಹಾಗೂ ಕೆಲ ನೆರೆಹೊರೆಯವರೊಂದಿಗೆ ವಿವಾದ ಇತ್ತು ಎನ್ನಲಾಗಿದೆ.
ಕಟಿಹಾರ್ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಂಪತಿ ಬಜ್ಜನ್ ದಾಸ್ ಮತ್ತು ಮಂಜು ದೇವಿ ನೀಡಿದ ಹೇಳಿಕೆ ಆಧಾರದ ಮೇಲೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಘೊರ್ದಾ ಗ್ರಾಮದಲ್ಲಿರುವ ದಲಿತ ಕುಟುಂಬದ ಗುಡಿಸಲಿಗೆ ನಿನ್ನೆ ತಡರಾತ್ರಿ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ಐದು ವರ್ಷದ ಪ್ರೀತಿ ಮತ್ತು ಮೂರು ವರ್ಷದ ಕಿರಣ್ ಸಜೀವ ದಹನವಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಜ್ಜನ್ ಮತ್ತು ಮಂಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದಲಿತ ದಂಪತಿ ವಿವಾದಿತ ಸರ್ಕಾರಿ ಭೂಮಿಯಲ್ಲಿ ಗುಡಿಸಲು ಹಾಕಿಕೊಂಡಿದ್ದರು ಮತ್ತು ಅಲ್ಲಿಯೇ ಟೀ ಅಂಗಡಿ ಸಹ ನಡೆಸುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ನೆರೆಹೊರೆಯವರು ಮನೆ ತೆರವುಗೊಳಿಸುವಂತೆ ಒತ್ತಡ ಹಾಕಿದ್ದರು. ಆದರೂ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಕಟಿಹಾರ್ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ಅವರು ಹೇಳಿದ್ದಾರೆ.