ಹೋಳಿ ಸಂಭ್ರಮದ ಬಳಿಕ ದಂಪತಿಗಳ ನಿಗೂಢ ಸಾವು
ಘಾಜಿಯಾಬಾದ್(ಉತ್ತರ ಪ್ರದೇಶ): ಹೋಳಿ ಸಂಭ್ರಮ ಮುಗಿಸಿದ್ದ ಕೆಲ ಗಂಟೆಗಳಲ್ಲಿಯೇ ದಂಪತಿಗಳಿಬ್ಬರ ಶವ ಮನೆಯೊಂದರ ಬಾತ್ ರೂಮ್ ನಲ್ಲಿ ಶಂಕಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನ ಇಂದಿರಾಪುರಂನಲ್ಲಿ ನಡೆದಿದೆ.
ಇಂದಿರಾಪುರಂನ ಫ್ಲಾಟ್ವೊಂದರಲ್ಲಿ ವಾಸವಾಗಿದ್ದ ಮೊಬೈಲ್ ಕಂಪನಿಯ ನೌಕರ ನೀರಜ್ ಸಿಂಘಾನಿಯಾ (38), ಹಾಗೂ ಆತನ ಪತ್ನಿ ರುಚಿ ಸಿಂಘಾನಿಯಾ(35) ಶವಗಳು ಸಂಪೂರ್ಣ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಇವರು ಕಿರಿಯ ಸಹೋದರ ಮತ್ತು ಸಹೋದರಿಯೊಂದಿಗೆ ಇಂದಿರಾಪುರಂ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು.
ಶುಕ್ರವಾರದಂದು ಹೋಳಿ ಆಚರಣೆ ಸಂಭ್ರಮ ಮುಗಿಸಿದ ದಂಪತಿ ಫ್ಲ್ಯಾಟ್ ಗೆ ಮರಳಿದ್ದಾರೆ. ಹಾಗೆ ಮರಳಿದ ದಂಪತಿ ಸ್ನಾನದ ಕೋಣೆಗೆ ಹೋಗಿದ್ದಾರೆ. ಆದರೆ ಬಹಳ ಸಮಯದವರೆಗೆ ಹೊರಬರಲಿಲ್ಲ. ಆಗ ನೀರಜ್ ತಂದೆ ಪ್ರೇಮ್ ಪ್ರಕಾಶ್ ಬಾಗಿಲು ಬಡಿದು ಕರೆಯಲು ಮುಂದಾದರೂ ದಂಪತಿಗಳಿಂದ ಯಾವ ಪ್ರತಿಕ್ರಿಯೆ ಬಂದಿಲ್ಲ. ಇನ್ನೂ ಕೆಲ ಕಾಲ ಕಾದ ಬಳಿಕ ಪ್ರೇಮ್, ನೀರಜ್ ಸಹೋದರನಿಗೆ ಹೇಳಿದ್ದು ಆತ ಸಹ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಆಗಲೂ ಒಳಗಿನಿಂಡ ಯಾವ ಸದ್ದೂ ಬಾರದ ಹಿನ್ನೆಲೆಯಲ್ಲಿ ವೆಂಟಿಲೇಟರ್ ಮೂಲಕ ನೋಡುವ ಪ್ರಯತ್ನ ನಡೆಸಿದ್ದಾರೆ. ಆಗ ದಂಪತಿಗಳಿಬ್ಬರೂ ಬಾತ್ ರೂಮ್ ನಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ತಿಳಿದಿದೆ. ತಕ್ಷಣ ಬಾಗಿಲು ಮುರಿದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಆಸ್ಪತ್ರೆ ವೈದ್ಯರು ದಂಪತಿಗಳನ್ನು ಪರೀಕ್ಷಿಸಿ ಇವರಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಬಾತ್ ರೂಮ್ ನಲ್ಲಿ ಬಿದ್ದಿದ್ದ ದಂಪತಿಯ ದೇಹದ ಸಮೀಪ ಬಿಪಿ ಮಾತ್ರೆಯ ಡಬ್ಬಿ ದೊರಕಿದ್ದು ಅವರ ಸಾವಿಗೆ ಕಾರಣ ತನಿಖೆಯಿಂದಷ್ಟೇ ತಿಳಿಯಬೇಕಿದೆ ಎಂದು ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಎಚ್.ಎನ್ ಸಿಂಗ್ ತಿಳಿಸಿದ್ದಾರೆ.. ’
ಹೋಳಿ ಆಚರಣೆಗಾಗಿ ರುಚಿ ಪೋಷಕರು ಸಹ ನೀರಜ್ ಮನೆಗೆ ಆಗಮಿಸಿದ್ದರು. ಇದೀಗ ದಂಪತಿಗಳ ಪಾರ್ಥಿವ ಶರೀರವನ್ನು ಫಾರೆನ್ಸಿಕ್ ಇಲಾಖೆಗೆ ಒಪ್ಪಿಸಲಾಗಿದೆ.ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos