ನವದೆಹಲಿ: 91 ಸುಸ್ತಿದಾರರಿಗೆ ಭಾರತ ಬಿಟ್ಟು ತೆರಳುವುದಕ್ಕೆ ನಿರ್ಬಂಧ ವಿಧಿಸುವ ಆಯ್ಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿರುವ ನಡುವೆಯೇ ಒಟ್ಟು 31 ಆರ್ಥಿಕ ಅಪರಾಧಿಗಳು ಈಗಾಗಲೇ ಭಾರತದಿಂದ ವಿದೇಶಕ್ಕೆ ಹಾರಿದ್ದಾರೆ.
ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಈ ಅಂಶವನ್ನು ಬಹಿರಂಗಪಡಿಸಿದ್ದು, ನೀರವ್ ಮೋದಿ ಸೇರಿದಂತೆ ಒಟ್ಟು 31 ಆರ್ಥಿಕ ಅಪರಾಧಿಗಳು ಈಗಾಗಲೇ ವಿದೇಶಗಳಿಗೆ ತೆರಳಿದ್ದಾರೆ ಎಂದು ಹೇಳಿದೆ. ವಿದೇಶಾಂಗ ಇಲಾಖೆ ರಾಜ್ಯ ಸಚಿವ ಎಂಜೆ ಅಕ್ಬರ್ ಈ ಬಗ್ಗೆ ಮಾಹಿತಿ ನೀಡಿದ್ದು, ಯಾವಾಗಿನಿಂದ ಈ ಎಲ್ಲಾ ಆರ್ಥಿಕ ಅಪರಾಧಿಗಳು ದೇಶ ಬಿಟ್ಟು ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
ಸಿಬಿಐ ನಿಂದ ಈ ಎಲ್ಲಾ ಆರೋಪಿಗಳ ಹಸ್ತಾಂತರಕ್ಕೆ ಮನವಿ ಬಂದಿದ್ದು, ವಿದೇಶಗಳಿಗೆ ಅಪರಾಧಿಗಳನ್ನು ಹಸ್ತಾಂತರಿಸುವಂತೆ ಕೋರಿಕೆ ಸಲ್ಲಿಸಲಾಗಿದೆ ಎಂದು ಎಂಜೆ ಅಕ್ಬರ್ ಲೋಕಸಭೆಗೆ ತಿಳಿಸಿದ್ದಾರೆ.